ಸರಾಸರಿ ಬೆಲೆಗೆ ತಂಬಾಕು ಖರೀದಿಸಿ: ಎಚ್.ಡಿ. ಕುಮಾರಸ್ವಾಮಿ
ಮೈಸೂರು: ‘ರಾಜ್ಯದ ತಂಬಾಕು ಮಾರುಕಟ್ಟೆಗಳಲ್ಲಿ ರೈತರಿಂದ ಹಿಂದಿನ ಸರಾಸರಿ ಅಥವಾ ಅದಕ್ಕಿಂತ ಹೆಚ್ಚು ಬೆಲೆಗೆ ಉತ್ಪನ್ನ ಖರೀದಿಸಬೇಕು. ತಂಬಾಕು ಮಂಡಳಿಯು ಹರಾಜು ಪ್ರಕ್ರಿಯೆ ಮೇಲೆ ನಿಗಾ ವಹಿಸಬೇಕು’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು. ಕೇಂದ್ರ ತಂಬಾಕು ಮಂಡಳಿಯು ಸೋಮವಾರ ಇಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳು ಹಾಗೂ ಪ್ರಮುಖ ವರ್ತಕರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ ತಂಬಾಕು ಉತ್ಪನ್ನಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಕುರಿತು ದೂರುಗಳಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಿದರೆ ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಆದರೆ ತೆರಿಗೆಯ ನೆಪದಲ್ಲಿ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಿ’ ಎಂದು ಸೂಚಿಸಿದರು.
ಐಟಿಸಿ ಕಂಪನಿ ಹಿರಿಯ ಅಧಿಕಾರಿ ರವಿ ‘ ತಂಬಾಕು ಉತ್ಪನ್ನಗಳಿಗೆ ವಿಧಿಸುತ್ತಿದ್ದ ಜಿಎಸ್ಟಿಯನ್ನು ಕೇಂದ್ರವು ಶೇ 18ರಿಂದ ಶೇ 40ಕ್ಕೆ ಏರಿಸಿದೆ. ಸಿಗರೇಟುಗಳ ಮೇಲಿನ ತೆರಿಗೆಯು ದುಪ್ಪಟ್ಟಾಗಿದ್ದು, ಪ್ರತಿ ಸಿಗರೇಟಿನಬೆಲೆ ₹6–7 ಜಾಸ್ತಿ ಆಗಿದೆ. ಹೀಗಾಗಿ ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತಿದ್ದು, ನಾವು ನಿಗದಿತ ಪ್ರಮಾಣಕ್ಕಿಂತ ಕಡಿಮೆ ತಂಬಾಕನ್ನು ಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ’ ಎಂದರು.
ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ ರಾಜ್ಯದಲ್ಲಿ ಈ ವರ್ಷ 8.5 ಕೋಟಿ ಕೆ.ಜಿ.ಯಷ್ಟು ತಂಬಾಕು ಬೆಳೆದಿದ್ದು, ಇದರಲ್ಲಿ 4 ಕೋಟಿ ಕೆ.ಜಿ.ಯಷ್ಟು ಉತ್ಪನ್ನ ಈಗಾಗಲೇ ಕಡಿಮೆ ಬೆಲೆಗೆ ಹರಾಜಾಗಿದೆ. ಉಳಿದ ಉತ್ಪನ್ನವನ್ನು ಹರಾಜು ಆರಂಭವಾದ ದಿನದ ಸರಾಸರಿ ಅಥವಾ ಅದಕ್ಕಿಂತ ಹೆಚ್ಚು ಬೆಲೆಗೆ ಖರೀದಿಸಿ’ ಎಂದು ಐಟಿಸಿ ಕಂಪನಿ ಪ್ರತಿನಿಧಿಗಳಿಗೆ ಹೇಳಿದರು.