ಜೆಜೆಎಂ ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ: ಸಿಬಿಐ ತನಿಖೆಗೆ ಜೀವರಾಜ್ ಒತ್ತಾಯ
ಜಲಜೀವನ್ ಮಿಷನ್ (ಜೆಜೆಎಂ) ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ ನಡೆದಿದ್ದು, ಸರಕಾರವು ಇದರ ಸಿಬಿಐ ತನಿಖೆ ಮಾಡಿಸಬೇಕೆಂದು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರು ಒತ್ತಾಯಿಸಿದ್ದಾರೆ. ಜಲಜೀವನ್ ಮಿಷನ್ (ಜೆಜೆಎಂ) ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ ನಡೆದಿದ್ದು, ಸರಕಾರವು ಇದರ ಸಿಬಿಐ ತನಿಖೆ ಮಾಡಿಸಬೇಕೆಂದು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರು ಒತ್ತಾಯಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಶೃಂಗೇರಿ ಕ್ಷೇತ್ರದಲ್ಲಿ ಜೆಜೆಎಂ ಎಂಬುದು ಜಲಜೀವನ್ ಕಮಿಷನ್ ಆಗಿದೆ ಎಂದು ದಾಖಲೆಗಳ ಜೊತೆ ಆರೋಪಿಸಿದರು. 150 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕೇಂದ್ರ ಸರಕಾರ ಕೊಟ್ಟಿದೆ. ಆದರೆ, ಒಂದೇ ಒಂದು ಮನೆಗೆ ನೀರು ಲಭಿಸಿಲ್ಲ ಎಂದು ದೂರಿದರು.
ಹಿಂದೆ ಕರೀಂಲಾಲ್ ತೆಲಗಿ ಮೂಲಕ ಸ್ಟಾಂಪ್ ಪೇಪರ್ ಹಗರಣ ನಡೆದಿತ್ತು. ಹಿಂದೆ ಸ್ಟಾಂಪ್ ಪೇಪರ್ ಮೇಲ್ಭಾಗದಲ್ಲಿ ನೋಟಿನಂತೆ ಮಾತ್ರ ಇರುತ್ತಿತ್ತು. ನಕಲಿ ಸ್ಟಾಂಪ್ ಪೇಪರ್ ಮಾಡುವುದು ಸುಲಭವಿತ್ತು. ಸರಕಾರವು ಬಳಿಕ ಅದನ್ನು ಬದಲಿಸಿ, ನಂಬರ್, ಕ್ಯೂಆರ್ ಕೋಡ್ ಕೊಟ್ಟು ಇಸ್ಟಾಂಪಿಂಗ್ ಆ್ಯಪ್ ಬಿಡುಗಡೆ ಮಾಡಿದೆ. ಅದರಲ್ಲಿ ಸ್ಕ್ಯಾನ್ ಮಾಡಿದಾಗ ಖರೀದಿಸಿದವರ ಮಾಹಿತಿ, ನಂಬರ್ ಬರಬೇಕು. ಈ ಜೆಜೆಎಂನಡಿ ಕರೀಂಲಾಲ್ ಬುದ್ಧಿವಂತಿಕೆಗೆ ಮೀರಿದ ಹಗರಣ ನಡೆದಿದೆ ಎಂದು ಆರೋಪಿಸಿದರು. ಇದು ಜೆಜೆಎಂ ಸಂಬಂಧ ಸರಕಾರದ ಜೊತೆ ಅಂದರೆ ಜಿಲ್ಲಾ ಪಂಚಾಯಿತಿ ಜೊತೆ ಆದ ಒಪ್ಪಂದದ ಸ್ಟಾಂಪ್ ಪೇಪರನ್ನು ಪ್ರದರ್ಶಿಸಿದರು. ‘ಐಎನ್ಕೆಎ 76845429815984 ಡಬ್ಲ್ಯೂ ನಂಬರಿನಲ್ಲಿ 2024ರಲ್ಲಿ ಒಂದೇ ದಿನ ಒಂದೇ ಸಮಯಕ್ಕೆ ಸ್ಟಾಂಪ್ ಪೇಪರ್ ಪಡೆದಂತೆ ಕಾಣುತ್ತಿದ್ದು, ಎನ್.ಆರ್.ಪುರ, ಕೊಪ್ಪ ತಾಲ್ಲೂಕಿನಲ್ಲಿ 9 ಒಪ್ಪಂದಗಳು ಆಗಿವೆ.
ಇನ್ನೊಂದು ಸಂಖ್ಯೆಯ ಸ್ಟಾಂಪ್ ಪೇಪರಿನಲ್ಲಿ ಬೋರ್ವೆಲ್ ಕೊರೆಸಲು 11 ಒಪ್ಪಂದಗಳಾಗಿವೆ. ಇದು ಸರಕಾರದ ಜೊತೆಗಿನ ಒಪ್ಪಂದ. ಪ್ರಿಯಾಂಕ್ ಖರ್ಗೆಯವರ ಖಾತೆಯ ಕೆಳಗೆ ಬರುವ ಇಲಾಖೆ ಇದು ಎಂದು ವಿವರ ನೀಡಿದರು.
ನಾವು ಪಡೆದ 30 ಒಪ್ಪಂದಗಳಲ್ಲಿ ಇದಿಷ್ಟು ಹಗರಣಗಳು ಪತ್ತೆಯಾಗಿದೆ. ಸ್ಟಾಂಪ್ ಪೇಪರ್ ನಕಲಿ ಆಗಿದೆ. ಸರಕಾರದ ಬೊಕ್ಕಸಕ್ಕೆ ಮೋಸ ಎನ್ನುವುದಕ್ಕಿಂತ ಇದು ಶೇ. 100% ರಷ್ಟು ಕ್ರಿಮಿನಲ್ ಚಟುವಟಿಕೆ ಎಂದು ಆರೋಪಿಸಿದರು. ಇದರ ಹಿಂದೆ ಶೃಂಗೇರಿ ಶಾಸಕರ ಎಡ- ಬಲ- ಹಾರ್ಟ್ ಎಲ್ಲರೂ ಇದ್ದಾರೆ. ಇದರಲ್ಲಿ ಶಾಸಕರ ಕೃಪಾಶೀರ್ವಾದದೊಂದಿಗೆ ಇಂಥ ಘಟನೆ ನಡೆದಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ದೂರಿದರು.
ಇನ್ನೊಂದು ಸ್ಟಾಂಪ್ ಪೇಪರ್ ಸ್ಕ್ಯಾನ್ ಮಾಡಿದರೆ ಇದು ಅಸಲಿ ಅಲ್ಲ ಎಂಬ ಅರ್ಥದ ಮಾಹಿತಿ ಬರುತ್ತಿದೆ. ಇದು ನಕಲಿಯೇ ಅಥವಾ ಅಸಲಿಯೇ ಎಂದು ತಿಳಿದಿಲ್ಲ ಎಂದು ಗಮನ ಸೆಳೆದರು. ಸ್ಥಳೀಯವಾಗಿ ತನಿಖೆ ನಡೆಸಿದರೆ ಇದನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ ಎಂದು ಹೇಳಿದರು.