ಪ.ಬಂಗಾಳ ಚುನಾವಣೆ: ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷ ತೊರೆದ ಟಿಎಂಸಿ ಶಾಸಕ
ಜಲ್ಪೈಗುರಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬೆನ್ನಲ್ಲೇ ತೃಣಮೂಲ (ಟಿಎಂಸಿ)ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ರಾಜಗಂಜ್ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಹಾಲಿ ಶಾಸಕ ಖಗೇಶ್ವರ್ ರಾಯ್ ಅವರು, ಜಲ್ಪೈಗುರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಗಂಜ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಯ್, ಉತ್ತರ ಬಂಗಾಳದಲ್ಲಿ ಪಕ್ಷದ ಹಿರಿಯ ಸಂಘಟಕರಾಗಿದ್ದರು. ಆದರೆ ಈ ಬಾರಿ ರಾಯ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅವರ ಬದಲಿಗೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅಥ್ಲೀಟ್ ಸ್ವಪ್ನಾ ಬರ್ಮನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ತೊರೆದು ಟಿಎಂಸಿ ಸ್ಥಾಪಿಸಿದಾಗಿನಿಂದಲೂ ನಾನು ಪಕ್ಷದೊಂದಿಗೆ ಇರುವುದಾಗಿ ಹೇಳಿದ ರಾಯ್, ‘ಇಂದು ನಾನು ಹಣದ ಶಕ್ತಿಯ ಮುಂದೆ ಸೋತಿದ್ದೇನೆ. ಯಾರೋ ಹಣ ನೀಡಿರಬೇಕು ಅದಕ್ಕಾಗಿಯೇ ನನ್ನ ಹೆಸರನ್ನು ಕೈಬಿಡಲಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. 'ಹಲವು ವರ್ಷಗಳಿಂದ ಪಕ್ಷವನ್ನು ಸಂಘಟಿಸಿದ್ದೇನೆ. ನನಗೆ ಟಿಕೆಟ್ ನಿರಾಕರಿಸಿರುವುದು ಅನ್ಯಾಯ' ಎಂದು ರಾಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಬದಲಾವಣೆಯಿಂದಾಗಿ ರಾಜಗಂಜ್ ಕ್ಷೇತ್ರದಲ್ಲಿ ಟಿಎಂಸಿ ಸೋಲನ್ನು ಅನುಭವಿಸಲಿದೆ' ಎಂದು ಅವರು ಭವಿಷ್ಯ ನುಡಿದಿದ್ದಾರೆ.
2018ರ ಏಷ್ಯನ್ ಗೇಮ್ಸ್ನ ಹೆಪ್ಟಾಥ್ಲಾನ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸ್ವಪ್ನಾ ಬರ್ಮನ್, ಜಲ್ಪೈಗುರಿ ಜಿಲ್ಲೆಯವರೇ ಆಗಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಟಿಎಂಸಿ ಸೇರಿದ್ದರು.