ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಅಭಾವದ ಆತಂಕ, ಬರಿದಾಗುತ್ತಿದೆ ಜೀವಜಲ!
ಮಂಡ್ಯ: ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 99 ಅಡಿಗೆ ಇಳಿದಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ಸಂಬಂಧಿಸಿ ಈಗ ನೀರಿನ ಅಭಾವ ಎದುರಾಗುವ ಭೀತಿ ಎದುರಾಗಿದೆ. ಕೆಆರ್ ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ಅದು ಗಂಭೀರವಾಗಿ ಕುಸಿದಿರುವುದು ಗಮನಾರ್ಹವಾಗಿದೆ. ಜಲಾಶಯದಲ್ಲಿ ಒಟ್ಟು 22 ಟಿಎಂಸಿ ನೀರು ಶೇಖರಣೆ ಇದ್ದರೂ, ಅದರಲ್ಲಿ 7 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವ ನೀರು ಕೇವಲ 15 ಟಿಎಂಸಿ ಮಾತ್ರವಾಗಿದೆ.
ಈ ಪರಿಸ್ಥಿತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಅಗತ್ಯವಾಗಿದ್ದು, ಕೃಷಿ ಕಾರ್ಯಗಳಿಗೆ ನಿಯಂತ್ರಿತವಾಗಿ ನೀರು ಒದಗಿಸುವುದು ಅನಿವಾರ್ಯವಾಗಿದೆ. ಜೊತೆಗೆ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಒಳ ಹರಿವು ಕೇವಲ 66 ಕ್ಯೂಸೆಕ್ ಇದ್ದು, ಹೊರ ಹರಿವು 4388 ಕ್ಯೂಸೆಕ್ ಇದೀಗ ಜಲಾಶಯಕ್ಕೆ ಒಳ ಹರಿವು ಕೇವಲ 66 ಕ್ಯೂಸೆಕ್ ಇದ್ದು, ಹೊರ ಹರಿವು 4388 ಕ್ಯೂಸೆಕ್ ಆಗಿದೆ. ಒಳ ಹರಿವು ಕಡಿಮೆಯಾಗಿದ್ದು, ಹೊರ ಹರಿವು ಹೆಚ್ಚು ಇರುವುದರಿಂದ ನೀರಿನ ಮಟ್ಟ ನಿರಂತರವಾಗಿ ಇಳಿಕೆಯಾಗುತ್ತಿದೆ. ಮುಂಗಾರು ಮಳೆ ತಡವಾದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಜೂನ್ ಮೊದಲ ವಾರದೊಳಗೆ ಸಮರ್ಪಕ ಮಳೆಯಾಗದಿದ್ದರೆ, ಮಂಡ್ಯ ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ಭೀತಿ ವ್ಯಕ್ತವಾಗಿದೆ.