ಬಂಗಾಳದಲ್ಲಿ ಇವತ್ತಿನಿಂದ ಹೊಸ ಶಕೆ.. ರಾಜ್ಯದ ಮೊದಲ ಬಿಜೆಪಿ CM ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ!
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಲಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಈ ಘೋಷಣೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಮಹತ್ವದ 10 ಬೆಳವಣಿಗೆಗಳು ಸರ್ಕಾರ ರಚನೆಗೆ ಹಕ್ಕು ಮಂಡನೆ: ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಸುವೇಂದು ಅಧಿಕಾರಿ ಅವರು ರಾಜಭವನದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ರಾಜ್ಯಪಾಲರು ಇಂದು ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅವರಿಗೆ ಆಹ್ವಾನ ನೀಡಿದ್ದಾರೆ.
ಪ್ರಧಾನಿ ಮೋದಿ ಭಾಗಿ: ಈ ಐತಿಹಾಸಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಎನ್ಡಿಎ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದಾರೆ. ಮಮತಾ ಮಾಜಿ ಆಪ್ತ: 55 ವರ್ಷದ ಸುವೇಂದು ಅಧಿಕಾರಿ ಅವರು ಹಿಂದೆ ತೃಣಮೂಲ ಕಾಂಗ್ರೆಸ್ನಲ್ಲಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ನಿಕಟವರ್ತಿ ಮತ್ತು ಸಂಘಟನಾ ಚತುರರಾಗಿದ್ದರು ಎಂಬುದು ಗಮನಾರ್ಹ. ಅಮಿತ್ ಶಾ ಶ್ಲಾಘನೆ: ಸುವೇಂದು ಹೆಸರನ್ನು ಘೋಷಿಸಿದ ಅಮಿತ್ ಶಾ, ಅಧಿಕಾರಿ ಅವರು ಒಬ್ಬ ಹೋರಾಟಗಾರ (Fighter). ಅವರಿಗೆ ಆಡಳಿತದ ಬಗ್ಗೆ ಆಳವಾದ ಜ್ಞಾನವಿದೆ ಮತ್ತು ಅವರು ಪ್ರತಿ ಹಂತದಲ್ಲೂ ಟಿಎಂಸಿ ವಿರುದ್ಧ ಹೋರಾಡಿದ್ದಾರೆ. ಬಂಗಾಳದ ಜನರ ನಿರೀಕ್ಷೆಗಳನ್ನು ಅವರು ಈಡೇರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಯ ಮುಕ್ತ ಬಂಗಾಳ: ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಸುವೇಂದು ಅಧಿಕಾರಿ, ಈಗ ಬಂಗಾಳದಲ್ಲಿ ಭಯದ ಕಾಲ ಮುಗಿದಿದೆ, ಭರವಸೆಯ ಕಾಲ ಆರಂಭವಾಗಿದೆ ಎಂದು ಘೋಷಿಸಿದರು. ಚುನಾವಣಾ ಫಲಿತಾಂಶ: 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಪಡೆದಿದೆ. ಆಡಳಿತಾರೂಢ ಟಿಎಂಸಿ ಕೇವಲ 80 ಸ್ಥಾನಗಳನ್ನು ಪಡೆಯಲಷ್ಟೇ ಶಕ್ತವಾಗಿದೆ. 55 ವರ್ಷಗಳ ದಾಖಲೆ: ಸುವೇಂದು ಅಧಿಕಾರಿ ಬಂಗಾಳದ 9ನೇ ಮುಖ್ಯಮಂತ್ರಿಯಾಗಲಿದ್ದಾರೆ. ಕಳೆದ 55 ವರ್ಷಗಳಲ್ಲಿ ಕೋಲ್ಕತ್ತಾದ ಹೊರಗಿನ ಜಿಲ್ಲಾ ಮಟ್ಟದ ಮೂಲದಿಂದ ಬಂದ ಮೊದಲ ಮುಖ್ಯಮಂತ್ರಿ ಇವರಾಗಿದ್ದಾರೆ.
1971ರಲ್ಲಿ ಅಜಯ್ ಮುಖರ್ಜಿ ಇಂತಹ ಕೊನೆಯ ಸಿಎಂ ಆಗಿದ್ದರು. ರಾಜಕೀಯ ಪಯಣ: ಮಾಜಿ ಕೇಂದ್ರ ಸಚಿವ ಶಿಶಿರ ಅಧಿಕಾರಿ ಅವರ ಪುತ್ರರಾದ ಸುವೇಂದು, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ ಮೂಲಕ ರಾಜಕೀಯ ಆರಂಭಿಸಿದ್ದರು. ನಂತರ ಟಿಎಂಸಿಯಲ್ಲಿ ಬೆಳೆದು, ಈಗ ಬಿಜೆಪಿಯ ಪ್ರಬಲ ನಾಯಕನಾಗಿ ಉನ್ನತ ಸ್ಥಾನಕ್ಕೇರಿದ್ದಾರೆ. ವಿಧಾನಸಭೆ ವಿಸರ್ಜನೆ: ಹಾಲಿ ವಿಧಾನಸಭೆಯ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಗುರುವಾರ ವಿಧಾನಸಭೆಯನ್ನು ವಿಸರ್ಜಿಸಿದ್ದರು. ಇದರಿಂದ ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಯಿತು. ಮಮತಾ ಬ್ಯಾನರ್ಜಿ ಆಕ್ರೋಶ: ಈ ನಡುವೆ ಮಮತಾ ಬ್ಯಾನರ್ಜಿ ಅವರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜನಾದೇಶವನ್ನು ಲೂಟಿ ಮಾಡಲಾಗಿದೆ, ಇದು ಸಂಚಿನ ಫಲಿತಾಂಶ ಎಂದು ಕಿಡಿಕಾರಿದ್ದ ಅವರು, ಆರಂಭದಲ್ಲಿ ರಾಜೀನಾಮೆ ನೀಡಲು ನಿರಾಕರಿಸಿದ್ದರು.