Bengaluru: ನಕಲಿ ಸುಪ್ರೀಂ ಆದೇಶ ನೀಡಿ ಪರಪ್ಪನ ಅಗ್ರಹಾರ ಜೈಲಿಂದ ಕೈದಿ ಎಸ್ಕೇಪ್, 8 ವರ್ಷಗಳ ಬಳಿಕ ಬಯಲಾಗಿದ್ದೇಗೆ ಕೃತ್ಯ?
ಬೆಂಗಳೂರು (ಮೇ.20): ಎಂತೆಂಥಾ ಜನರಿರ್ತಾರೆ ಅಂದ್ರೆ, ಎಲ್ಲಾ ಸರ್ಟಿಫಿಕೇಟ್, ದಾಖಲೆಗಳನ್ನ ಡೂಪ್ಲಿಕೇಟ್ ಮಾಡೋ ಕಿಡಿಗೇಡಿಗಳು ಸುಪ್ರೀಂ ಕೋರ್ಟ್ ಆದೇಶವನ್ನೂ ಬಿಟ್ಟಿಲ್ಲ. ಹೌದು ಸುಪ್ರೀಂ ಕೋರ್ಟ್ನ (Supreme Court) ನಕಲಿ ಆದೇಶ ತೋರಿಸಿ ಬೆಂಗಳೂರಿನ (Bengaluru) ಜೈಲಿಂದ ವ್ಯಕ್ತಿಯೊಬ್ಬ ರಿಲೀಸ್ ಆಗಿದ್ದು, 8 ವರ್ಷಗಳ ಬಳಿಕ ಅಸಲಿ ಸತ್ಯ ಬಯಲಾಗಿದೆ. ಈತ ಪೊಲೀಸರಿಗೆ (Police) ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ? ಅಸಲಿ ಕಥೆ ಇಲ್ಲಿದೆ. ನಕಲಿ ಸುಪ್ರೀಂ ಆದೇಶ ಕೊಟ್ಟು ಜೈಲಿಂದ ರಿಲೀಸ್ ಸುಮಾರು ಎಂಟು ವರ್ಷಗಳ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ ಶಂಕರ್ ಎಂಬಾತ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಬಂಧಿಯಾಗಿದ್ದ. ಜೈಲಿನಿಂದ ಹೇಗಾದ್ರೂ ರಿಲೀಸ್ ಆಗ್ಬೇಕು ಅಂತ ಸುಪ್ರೀಂ ಕೋರ್ಟ್ ಆದೇಶದಂತೆ ನಕಲಿ ದಾಖಲೆಗಳನ್ನ ಸೃಷ್ಟಿಸಿದ್ದಾನೆ. ಅವುಗಳನ್ನೇ ಪೊಲೀಸರಿಗೆ ತೋರಿಸಿ ಬಿಡುಗಡೆಯಾಗಿ ಪರಾರಿಯಾಗಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇಂತಹ ಕೇಸ್ ಅಪರೂಪದಲ್ಲಿ ಅಪರೂಪವೇ ಆಗಿದೆ.
2001ರಲ್ಲಿ ಅಪಹರಣ-ಸುಲಿಗೆ ಪ್ರಕರಣದಲ್ಲಿ ಶಂಕರ್ ಎಂಬಾತನನ್ನ ಬಂಧಿಸಲಾಗಿತ್ತು. ಈತನ ಮೇಲೆ ಐಪಿಸಿ ಸೆಕ್ಷನ್ 364 ಎ ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆಗೆ ನೀಡಿತ್ತು. ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಲು ಅಂದು ಕೋರ್ಟ್ ಆದೇಶ ಹೊರಡಿಸಿತ್ತು. ಶಿಕ್ಷೆ ಜೊತೆಗೆ ಅಪರಾಧಿಗೆ 5,000 ರೂಪಾಯಿ ದಂಡ ಸಹ ವಿಧಿಸಲಾಗಿತ್ತು.
2018ರ ಆದೇಶದ ಬಳಿಕ ಆತ ರಿಲೀಸ್ 2018ರಲ್ಲಿ ಜೈಲು ಅಧಿಕಾರಿಗಳಿಗೆ ಒಂದು ಪತ್ರ ಬಂದಿತ್ತು. ಅಪರಾಧಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಲಾಗಿದೆ. ಅದರಡಿ ಬಿಡುಗಡೆ ಆದೇಶ ನೀಡಲಾಗಿದೆ ಎಂದು ಪತ್ರದಲ್ಲಿ ಬರೆದಿತ್ತು. ಅದರಂತೆ ಡಿಸೆಂಬರ್ ಅಂತ್ಯಕ್ಕೆ ಆತ ಜೈಲಿನಿಂದ ಆತ ಅಕ್ರಮವಾಗಿ ಬಿಡುಗಡೆ ಆಗಿದ್ದ. ಈ ದಾಖಲೆಗಳು ಅಕ್ರಮ ಅನ್ನೋದು ಜೈಲಾಧಿಕಾರಿಗಳಿಗೆ ಗೊತ್ತಾಗಲಿಲ್ಲ. ಶಂಕರ್ ಕಳ್ಳಾಟ ಬಯಲಾಗಿದ್ದು ಹೇಗೆ? 8 ವರ್ಷದ ಬಳಿಕ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ (DG) ಒಂದು ಪತ್ರ ಬಂದಿದೆ. ಆ ಪತ್ರದಲ್ಲಿ ಶಂಕರ್ ಎಂಬಾತ ನಕಲಿ ದಾಖಲೆ ನೀಡಿ ಜೈಲಿಂದ ಪರಾರಿಯಾಗಿದ್ದಾನೆ ಎಂದು ಬರೆಯಲಾಗಿತ್ತು, ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ಆಂತರಿಕ ತನಿಖೆಗೆ ಆದೇಶಿಸಿದೆ. ತನಿಖೆಯ ವೇಳೆ ಸುಪ್ರೀಂ ಕೋರ್ಟ್ನಿಂದ ಯಾವುದೇ ಬಿಡುಗಡೆ ಆದೇಶ ಬಂದೇ ಇಲ್ಲ, ನಕಲಿ ಆದೇಶ ಪತ್ರ ಕೊಟ್ಟು ಶಂಕರ್ ಎಸ್ಕೇಪ್ ಆಗಿರೋ ವಿಚಾರ ಇದೀಗ ಬಯಲಾಗ್ತಿದೆ.