ಅರಸು, ದೇವೇಗೌಡ, ಬಿಎಸ್ವೈ: ಅವಧಿಗೂ ಮುನ್ನ ರಾಜೀನಾಮೆ ನೀಡಿದ ಮುಖ್ಯಮಂತ್ರಿಗಳಿವರು
ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನ ರಾಜೀನಾಮೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾಜೀನಾಮೆ ನೀಡಬೇಕು ಎನ್ನುವ ಹೈಕಮಾಂಡ್ ಸೂಚನೆಗೆ ಅವರು ಒಪ್ಪಿಕೊಂಡಿದ್ದು, ಗುರುವಾರ ಪದತ್ಯಾಗ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಕೂಡ ಅವಧಿ ಪೂರ್ಣಗೊಳ್ಳುವ ಮುನ್ನವೇ ಮುಖ್ಯಮಂತ್ರಿ ರಾಜೀನಾಮೆ ನೀಡಿದ ಪ್ರಸಂಗಗಳು ಇವೆ. ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡ ನಿದರ್ಶನವೂ ನಡೆದಿದೆ.
ಏಕೀಕರಣಗೊಂಡಿದ್ದ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಎಸ್. ನಿಜಲಿಂಗಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದರು. ಪಕ್ಷದೊಳಗಿನ ಲಿಂಗಾಯತ ಶಾಸಕರಲ್ಲಿ ತೀವ್ರ ಭಿನ್ನಮತ ಉಂಟಾಯಿತು. ಪಕ್ಷದ ಹೈಕಮಾಂಡ್ ಭಿನ್ನಮತೀಯರ ಪರವಾಗಿ ನಿಂತಿದ್ದರಿಂದ, ನಿಜಲಿಂಗಪ್ಪ ಅವರು ಅವಧಿಗೆ ಮುನ್ನವೇ ಪದತ್ಯಾಗ ಮಾಡಬೇಕಾಯಿತು. ಬಿ.ಡಿ. ಜತ್ತಿ ಮುಂದಿನ ಸಿ.ಎಂ ಆದರು.
1969ರಲ್ಲಿ ಕಾಂಗ್ರೆಸ್ ವಿಭಜನೆಯಾದ ಬಳಿಕ ವೀರೇಂದ್ರ ಪಾಟೀಲ್ ಕಾಂಗ್ರೆಸ್ (ಓ) ಬಣದೊಂದಿಗೆ ಗುರುತಿಸಿಕೊಂಡಿದ್ದ ಸರ್ಕಾರದ ನೇತೃತ್ವ ವಹಿಸಿದ್ದರು. 1971 ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಭರ್ಜರಿ ಜಯಗಳಿಸಿದ ಬಳಿಕ, ಪಾಟೀಲ್ ಸಂಪುಟದ ಹಲವು ಮಂದಿ ಪಕ್ಷಾಂತರ ಮಾಡಿದರು. ಬಹುಮತವನ್ನು ಕಳೆದುಕೊಂಡ ಪಾಟೀಲ್ ರಾಜೀನಾಮೆ ನೀಡಿದರು. ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು.