ಪ್ರಧಾನಿ ಮೋದಿ ಭೇಟಿಯಾದ ತಮಿಳುನಾಡು ಸಿಎಂ ವಿಜಯ್: ಮಹತ್ವದ ವಿಷಯಗಳ ಕುರಿತು ಚರ್ಚೆ
ನವದೆಹಲಿ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ಸಿ. ಜೋಸೆಫ್ ವಿಜಯ್ ಅವರು ಬುಧವಾರ (ಮೇ.27) ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ನಟನೆಯಿಂದ ರಾಜಕೀಯಕ್ಕೆ ಬಂದು ತಮಿಳುನಾಡಿನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ನಡೆದಿರುವ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸುಮಾರು 12 ವರ್ಷಗಳ ನಂತರ ಉಭಯ ನಾಯಕರು ಮುಖಾಮುಖಿಯಾಗಿರುವುದು ಮತ್ತೊಂದು ವಿಶೇಷ. ರಾಜಧಾನಿಯ 'ಸೇವಾ ತೀರ್ಥ'ದಲ್ಲಿ ನಡೆದ ಈ ಅಧಿಕೃತ ಸಭೆಯು ಸುಮಾರು 25 ನಿಮಿಷಗಳ ಕಾಲ ನಡೆಯಿತು.
ತಮಿಳುನಾಡಿನ ಹೊಸ ನಾಯಕತ್ವ ಹಾಗೂ ಕೇಂದ್ರ ಸರ್ಕಾರದ ನಡುವಿನ ಭವಿಷ್ಯದ ರಾಜಕೀಯ ಸಮೀಕರಣಗಳ ಕುರಿತು ಈ ಭೇಟಿ ಪ್ರಮುಖ ದಿಕ್ಸೂಚಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ವೇಳೆ ಸಿಎಂ ವಿಜಯ್ ಅವರು ತಮಿಳುನಾಡಿನ ಪ್ರಮುಖ ಬೇಡಿಕೆಗಳನ್ನೊಳಗೊಂಡ ಸುದೀರ್ಘ ಮನವಿ ಪತ್ರವನ್ನು ಸಲ್ಲಿಸಿದರು. ಇದರಲ್ಲಿ ಮುಖ್ಯವಾಗಿ ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆಗೆ ತೀವ್ರ ವಿರೋಧ, ವಂದೇ ಮಾತರಂ ವಿವಾದ, ರಕ್ಷಣಾ ಯೋಜನೆಗಳು ಮತ್ತು ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡು ಮೀನುಗಾರರ ಬಂಧನ ಮುಂತಾದ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.