ಸಂಪುಟ ಪುನಾರಚನೆ ಸುದ್ದಿ ಬಂದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ‘ರಾಜ್ಯ ಸಚಿವ ಸಂಪುಟ ಪುನಾರಚನೆಯ ಸುದ್ದಿ ನನಗಿನ್ನೂ ಬಂದಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು. ಈ ಮೂಲಕ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ತಳ್ಳಿಹಾಕಿದರು.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಗುರುವಾರ ಮಧ್ಯಾಹ್ನ ಕಲಬುರಗಿಗೆ ಬಂದಿಳಿದ ಅವರು, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ವೇಳೆ ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ‘ನಾನು ಸದ್ಯ ಕಲಬುರಗಿಯಲ್ಲಿದ್ದೇನೆ. ಏನಾದರೂ ಫೈಲ್ ಬರುವುದಾದರೆ ನನ್ನ ಹತ್ತಿರವೇ ಬರಬೇಕು, ಬೇರೆಯವರ ಹತ್ತಿರವಂತೂ ಹೋಗಲ್ಲ. ಯಾರನ್ನಾದರೂ ನೇಮಿಸಬೇಕಿದ್ದರೆ, ಯಾರಿಗಾದರೂ ಸಚಿವ ಸ್ಥಾನ ನೀಡಬೇಕಾದರೆ, ಯಾರನ್ನಾದರೂ ಸಚಿವ ಸ್ಥಾನದಿಂದ ತೆಗೆಯಬೇಕಾದರೆ ಆ ಕಡತ ನನ್ನ ಹತ್ತಿರ ಬರದೇ ಹೋಗಲ್ಲ. ಅದು ಬಂದಾಗ ನಿಮಗೆ (ಮಾಧ್ಯಮ) ತಿಳಿಸುವೆ’ ಎಂದರು.
ಇನ್ನು, ‘ನೇಪಾಳ ದುರಂತದಲ್ಲಿ ಮೃತರಾದವರಿಗೆಲ್ಲ ನಾನು ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ. ಈ ಅವಘಡದಲ್ಲಿ ಮೃತರಾದವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ನೇಪಾಳ ಸರ್ಕಾರಕ್ಕೆ ನೆರವಿನ ಹಸ್ತಚಾಚಬೇಕು. ಇಂಥ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ನಾವೆಲ್ಲ ದೇಶದ ಜನ ಒಗ್ಗೂಡಿ ಕೆಲಸ ಮಾಡಬೇಕು. ಈ ಸಂಬಂಧ ನಾನು ಪ್ರಧಾನಿಗೆ ಶೀಘ್ರವೇ ಪತ್ರ ಬರೆಯುವೆ’ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.