ಕೃಷಿ ಕ್ರಾಂತಿಗೆ ತಂತ್ರಜ್ಞಾನ; ಎಐ ಆಧಾರಿತ ಅಡಿಕೆ ವಿಂಗಡಣಾ ಯಂತ್ರ ರೂಪಿಸಿದ ಅನರ್ಘ್ಯ
ತೀರ್ಥಹಳ್ಳಿ: ಮಲೆನಾಡು ಪ್ರದೇಶ ತನ್ನ ಕೃಷಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪದ್ಧತಿಗಳಿಗೆ ಹೆಸರುವಾಸಿಯಾಗಿದೆ. ಈ ಭಾಗದ ಕೃಷಿಕರ ಜೀವನೋಪಾಯಕ್ಕೆ ಅಡಿಕೆ ಅತ್ಯಂತ ಪ್ರಮುಖ ಹಾಗೂ ತಳಹದಿಯ ವಾಣಿಜ್ಯ ಬೆಳೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಅಭಾವ ತೀವ್ರವಾಗುತ್ತಿದ್ದು, ಇದನ್ನು ಎದುರಿಸಲು ಆಧುನಿಕ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಅಡಿಕೆ ಕೊಯ್ಯಲು ಹಗುರವಾದ ಫೈಬರ್ ಹಾಗೂ ಕಾರ್ಬನ್ ಡ್ಯೂಟಿ ರಾಡ್ಗಳು ಮತ್ತು ಸಿಪ್ಪೆ ಸುಲಿಯುವ ಯಂತ್ರಗಳು ಈಗಾಗಲೇ ಬಳಕೆಯಲ್ಲಿದ್ದು, ಕೃಷಿ ಚಟುವಟಿಕೆಯನ್ನು ಒಂದಷ್ಟು ಸುಲಭಗೊಳಿಸಿವೆ.
ಆದರೆ, ಸುಲಿದ ಅಡಿಕೆಯನ್ನು ಬೇಯಿಸಿ, ಒಣಗಿಸಿದ ನಂತರ ಅದನ್ನು ಗುಣಮಟ್ಟಕ್ಕೆ ತಕ್ಕಂತೆ 4 ವಿಭಾಗಗಳಾಗಿ ಕೈಯಿಂದ ವಿಂಗಡಿಸುವುದು ಅತ್ಯಂತ ಶ್ರಮದಾಯಕ ಹಾಗೂ ಸುದೀರ್ಘ ಸಮಯ ತೆಗೆದುಕೊಳ್ಳುವ ಸವಾಲಿನ ಕೆಲಸವಾಗಿ ಉಳಿದಿತ್ತು.
ಈ ಸಾಂಪ್ರದಾಯಿಕ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಸೃಜನಶೀಲ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಸನ್ನ ಹೊಳ್ಳ ಹಾಗೂ ಸಂಸ್ಕೃತ ಪ್ರಾಧ್ಯಾಪಕಿ ಪ್ರಭಾ ಹೊಳ್ಳ ದಂಪತಿಯ ಪುತ್ರಿ, ಸೇವಾ ಭಾರತಿ ಶಾಲೆಯ ವಿದ್ಯಾರ್ಥಿನಿ ಅನರ್ಘ್ಯ ಪಿ. ಹೊಳ್ಳ ಅವರು ಅತ್ಯುತ್ತಮ 'ಎಐ (AI) ಆಧಾರಿತ ಅಡಿಕೆ ವಿಂಗಡಣಾ ಯಂತ್ರ'ದ ಮಾದರಿಯನ್ನು ಅಭಿವೃದ್ಧಿಪಡಿಸಿ ಭರವಸೆ ಮೂಡಿಸಿದ್ದಾರೆ.
6ನೇ ತರಗತಿಯ ವಿಜ್ಞಾನ ಮಾದರಿಯಾಗಿ ರೂಪುಗೊಂಡಿರುವ ಈ ಯಂತ್ರ ಕೃತಕ ಬುದ್ಧಿಮತ್ತೆ ಮತ್ತು ಮೈಕ್ರೋಕಂಟ್ರೋಲರ್ ತಂತ್ರಜ್ಞಾನವನ್ನು ಅತ್ಯಂತ ಸಾಮರಸ್ಯದಿಂದ ಸಂಯೋಜಿಸಿ ನಿರ್ಮಿಸಲಾಗಿದೆ.
ಈ ಯಂತ್ರದ ಕಾರ್ಯವೈಖರಿ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಮೇಲ್ಭಾಗದ ನಾಳದ ಮೂಲಕ ಹಸ, ಬೆಟ್ಟೆ, ರಾಶಿ ಇಡಿ ಮತ್ತು ಗೊರಬಲು ಎಂಬ ನಾಲ್ಕೂ ಬಗೆಯ ಒಣಗಿಸಿದ ಅಡಿಕೆಗಳನ್ನು ಹಾಕಲಾಗುತ್ತದೆ. ಕೆಳಭಾಗದಲ್ಲಿರುವ ಸ್ಟಾರ್ ವೀಲ್ ಮೆಕ್ಯಾನಿಸಂ ಅಡಿಕೆಗಳು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳದೆ ಸಾಲಾಗಿ ಎಡಭಾಗದ ಕನ್ವೇಯರ್ ಬೆಲ್ಟ್ಗೆ ಸಾಗುವಂತೆ ನಿಯಂತ್ರಿಸುತ್ತದೆ.