ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಪ್ರಮುಖವಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ವಹಣೆ ಮಾಡುತ್ತಿದ್ದ ಗಣಿ ಕಾರ್ಯದರ್ಶಿ ಹುದ್ದೆಗೆ ವಿಪುಲ್ ಬನ್ಸಾಲ್ ಅವರನ್ನು ನೇಮಕ ಮಾಡಿದೆ. ಮುಂದುವರೆದು, ಬೆಂಗಳೂರು ಗ್ರಾಮಾಂತರಕ್ಕೆ ಹೊಸ ಜಿಲ್ಲಾಧಿಕಾರಿ ನೇಮಕ ಮಾಡಲಾಗಿದೆ. ಐಎಫ್ಎಸ್ ಅಧಿಕಾರಿ ಡಾ. ದಿನೇಶ್ ಕುಮಾರ್ ವೈ.ಕೆ ಅವರಿಗೆ 104 ಮತ್ತು 108 ಸಹಾಯವಾಣಿ ಕಮಾಂಡ್ ಸೆಂಟರ್ ಜವಾಬ್ದಾರಿ ನೀಡಲಾಗಿದೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಿರ್ವಹಣೆ ಮಾಡುತ್ತಿದ್ದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ (ಗಣಿ) ಕಾರ್ಯದರ್ಶಿ ಹುದ್ದೆಗೆ ಹೊಸ ಐಎಎಸ್ ಅಧಿಕಾರಿ ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಮಂಗಳವಾರ ಸರ್ಕಾರದ ಆಡಳಿತ ಮತ್ತು ಸುಧಾರಣೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, 2005 ನೇ ಬ್ಯಾಚ್ನ ಹಿರಿಯ ಐಎಎಸ್ ಅಧಿಕಾರಿ ವಿಪುಲ್ ಬನ್ಸಾಲ್ ಅವರಿಗೆ ವಾಣಿಜ್ಯ ತೆರಿಗೆ ಆಯುಕ್ತರ ಹುದ್ದೆಯ ಜತೆಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ (ಗಣಿ) ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಎಂಎಸ್ಎಂಇ ಹಾಗೂ ಗಣಿ ವಿಭಾಗದ ಕಾರ್ಯದರ್ಶಿ ಹುದ್ದೆ ಒಟ್ಟಿಗೆ ಇದ್ದು, ರೋಹಿಣಿ ಸಿಂಧೂರಿಯವರನ್ನು ಕಳೆದ ವರ್ಷ (2025) ಅಕ್ಟೋಬರ್ 10 ರಂದು ನೇಮಕ ಮಾಡಲಾಗಿತ್ತು. ಸದ್ಯ ಗಣಿ ವಿಭಾಗಕ್ಕೆ ಪ್ರತ್ಯೇಕ ಕಾರ್ಯದರ್ಶಿ ಹುದ್ದೆಯನ್ನು ಹೊಸದಾಗಿ ರಚಿಸಿದ್ದು, ಆ ಹುದ್ದೆಗೆ ವಿಪುಲ್ ಬನ್ಸಾಲ್ ನೇಮಿಸಲಾಗಿದೆ.
ಬೆಂಗಳೂರು ಗ್ರಾಮಾಂತರಕ್ಕೆ ನೂತನ ಜಿಲ್ಲಾಧಿಕಾರಿ ನೇಮಕ
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಬಸವರಾಜು ವರ್ಗಾವಣೆಯಾಗಿದ್ದಾರೆ. ನೂತನ ಜಿಲ್ಲಾಧಿಕಾರಿಯಾಗಿ ಹಾಲಿ ಬೆಂಗಳೂರು ಗ್ರಾಮಾಂತರ ಜಿಪಂ ಸಿಇಒ ಆಗಿದ್ದ ಡಾ. ಕೆಎನ್ ಅನುರಾಧ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಡಾ. ಕೆಎನ್ ಅನುರಾಧ ಅವರಿಗೆ ಜಿಲ್ಲಾಧಿಕಾರಿ ಹುದ್ದೆ ಜತೆಗೆ ಹೆಚ್ಚುವರಿ ಜವಾಬ್ದಾರಿಯಾಗಿ ಜಿಪಂ ಸಿಇಒ ಅಗಿ ಮುಂದಿನ ಆದೇಶದವರಿಗೂ ಮುಂದುವರಿಯಲಿದ್ದಾರೆ.
ಐಎಫ್ಎಸ್ ಅಧಿಕಾರಿ ವರ್ಗಾವಣೆ
ಬೆಂಗಳೂರಿನ ಕಾರ್ಮಿಕ ಇಲಾಖೆಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ವೈ.ಕೆ ಅವರಿಗೆ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ (108 ಆರೋಗ್ಯ ರಕ್ಷಣೆ ಮತ್ತು 104-ಆರೋಗ್ಯ ಸಹಾಯವಾಣಿ) ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಐಎಎಸ್ ಅಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ಹೆಚ್ಚುವರಿ ಹೊಣೆಯಿಂದ ಬಿಡುಗಡೆ ಮಾಡಲಾಗಿದೆ.
ಕಳೆದ ಒಂದು ತಿಂಗಳಿಂದ ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು
ಎಬಿ ಬಸವರಾಜು - ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ.
ಡಾ. ಕೆಎನ್ ಅನುರಾಧ - ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ನೇಮಕ.
ಡಾ. ದಿನೇಶ್ ಕುಮಾರ್ ವೈ.ಕೆ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಹೆಚ್ಚುವರಿ ಜವಾಬ್ದಾರಿ.
ವಿಪುಲ್ ಬನ್ಸಾಲ್ - ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ) ಕಾರ್ಯದರ್ಶಿ ಹೆಚ್ಚುವರಿ ಜವಾಬ್ದಾರಿ.
ರಾಜ್ಯದ IAS ಅಧಿಕಾರಿಗಳ ವರ್ಗಾವಣೆ:
Source : VijayKarnataka
1 hour ago