ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತದ ಮೌನಕ್ಕೆ ಮೆಹಬೂಬಾ ಮುಫ್ತಿ ತೀವ್ರ ಅಸಮಾಧಾನ
ಶ್ರೀನಗರ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿಯ ಕುರಿತು ಭಾರತ ಸರ್ಕಾರ ತೋರುತ್ತಿರುವ 'ಮೌನ'ವನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ತೀವ್ರವಾಗಿ ಖಂಡಿಸಿದ್ದಾರೆ.
ಬುಧವಾರ ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಈ ನಿಗೂಢ ಮೌನವು ಅರ್ಥಹೀನವಾದುದು ಎಂದು ಕಿಡಿಕಾರಿದ್ದಾರೆ.
ಭಾರತ ಮತ್ತು ಇರಾನ್ ನಡುವಿನ ಹಳೆಯ ಸಂಬಂಧವನ್ನು ನೆನಪಿಸಿದ ಮಾಜಿ ಮುಖ್ಯಮಂತ್ರಿ ಮುಫ್ತಿ, "ಭಾರತ ಅಣು ಪರೀಕ್ಷೆ ನಡೆಸಿದಾಗ ಜಗತ್ತಿನ ರಾಷ್ಟ್ರಗಳು ನಿರ್ಬಂಧ ಹೇರಿದ್ದವು. ಅಂತಹ ಸಂಕಷ್ಟದ ಸಮಯದಲ್ಲಿ ಇರಾನ್ ನಮಗೆ ತೈಲ ನೀಡಿ ಬೆಂಬಲವಾಗಿ ನಿಂತಿತ್ತು.
ಕಾಶ್ಮೀರ ವಿಷಯದಲ್ಲಿ ಬಹುತೇಕ ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನವನ್ನು ಬೆಂಬಲಿಸಿದರೆ, ಇರಾನ್ ಮಾತ್ರ ಸದಾ ಭಾರತದ ಪರವಾಗಿಯೇ ಇರುತ್ತಿತ್ತು. ಆದರೆ ಇಂದು ಆ ದೇಶದ ಮೇಲೆ ದಾಳಿಯಾದಾಗ ಭಾರತದ ನಾಯಕತ್ವ ಕನಿಷ್ಠ ಸಂತಾಪವನ್ನೂ ಸೂಚಿಸದಿರುವುದು ದುರದೃಷ್ಟಕರ," ಎಂದು ಬೇಸರ ವ್ಯಕ್ತಪಡಿಸಿದರು. ಮುಸ್ಲಿಂ ರಾಷ್ಟ್ರಗಳ ವಿರುದ್ಧವೂ ವಾಗ್ದಾಳಿ
ಗಲ್ಫ್ ರಾಷ್ಟ್ರಗಳು ಮತ್ತು ಪಾಕಿಸ್ತಾನದ ನಿಲುವನ್ನು ಟೀಕಿಸಿದ ಅವರು"ಅರಬ್ ರಾಷ್ಟ್ರಗಳು ಅಮೆರಿಕಕ್ಕೆ ನೆಲೆಗಳನ್ನು ಒದಗಿಸುವ ಮೂಲಕ ಇರಾನ್ ಮೇಲಿನ ದಾಳಿಗೆ ಪರೋಕ್ಷವಾಗಿ ಸಹಕರಿಸುತ್ತಿವೆ ಎಂದರು.
ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಇತ್ತೀಚಿನ ರಕ್ಷಣಾ ಒಪ್ಪಂದವು ಇಸ್ರೇಲ್ ವಿರುದ್ಧವಲ್ಲ, ಬದಲಾಗಿ ಇರಾನ್ ವಿರುದ್ಧ ಎಂಬಂತೆ ತೋರುತ್ತಿದೆ.
ಎಲ್ಲಾ ಮುಸ್ಲಿಂ ರಾಷ್ಟ್ರಗಳು ಅಮೆರಿಕ ಮತ್ತು ಇಸ್ರೇಲ್ನ ಕೈಗೊಂಬೆಗಳಾಗಿವೆ ಎಂದು ಅವರು ಆರೋಪಿಸಿದರು. ದಾಳಿಯನ್ನು ಪ್ರತಿಭಟಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರತಿಕೃತಿಗಳನ್ನು ಮೆಹಬೂಬಾ ಮುಫ್ತಿ ದಹಿಸಿದರು. "ಈ ಇಬ್ಬರು ನಾಯಕರು ಯುದ್ಧಾಪರಾಧಿಗಳು. ಇರಾನ್ನಂತಹ ಸಾರ್ವಭೌಮ ದೇಶದ ಮೇಲೆ ದಾಳಿ ನಡೆಸಿ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಮಾಡಿರುವುದು ಖಂಡನೀಯ. ಕಣಿವೆಯ ಜನರು ಇರಾನ್ನ ಧೈರ್ಯ ಮತ್ತು ಬಲಿದಾನದ ಪರವಾಗಿ ನಿಂತಿದ್ದಾರೆ ಎನ್ನುವ ಸಂದೇಶವನ್ನು ನಾವು ಜಗತ್ತಿಗೆ ನೀಡುತ್ತಿದ್ದೇವೆ," ಎಂದು ಹೇಳಿದರು.