ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ: ಭಟ್ಕಳದಲ್ಲಿ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಬಂಕ್ನಲ್ಲಿ ಕ್ಯೂ ನಿಂತ ವಾಹನ ಸವಾರರು!
ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ, ಇಂಧನ ಬೆಲೆ ಏರಿಕೆ ಅಥವಾ ಪೂರೈಕೆ ಸ್ಥಗಿತದ ಭೀತಿಯಿಂದ ಉತ್ತರ ಕನ್ನಡದ ಭಟ್ಕಳದಲ್ಲಿ ಜನರು ಪೆಟ್ರೋಲ್ಗಾಗಿ ಮುಗಿಬಿದ್ದಿದ್ದಾರೆ. ವಾಹನಗಳಲ್ಲದೆ, ಬಾಟಲಿ ಮತ್ತು ಕ್ಯಾನ್ಗಳಲ್ಲಿಯೂ ಪೆಟ್ರೋಲ್ ಸಂಗ್ರಹಿಸುತ್ತಿದ್ದು, ಬಂಕ್ಗಳ ಮುಂದೆ ಕ್ಯೂ ಹೆಚ್ಚಾಗಿದೆ. ಉತ್ತರ ಕನ್ನಡ ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಇದರ ಬಿಸಿ ಈಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೂ ತಟ್ಟಿದ್ದು, ಕಳೆದ ಎರಡು ದಿನಗಳಿಂದ ಪೆಟ್ರೋಲ್ ಬಂಕ್ಗಳ ಮುಂದೆ ವಾಹನಗಳ ದೀರ್ಘ ಸಾಲುಗಳು ಕಂಡುಬರುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಬಹುದು ಅಥವಾ ಇಂಧನ ಪೂರೈಕೆಯೇ ಸ್ಥಗಿತಗೊಳ್ಳಬಹುದು ಎಂಬ ಭಯದಲ್ಲಿ ಸಾರ್ವಜನಿಕರು ಮುಗಿಬಿದ್ದು ಪೆಟ್ರೋಲ್ ಖರೀದಿಸುತ್ತಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್ ಸರ್ಕಾರವು ಪರ್ಶಿಯನ್ ಕೊಲ್ಲಿಯನ್ನು ಓಮಾನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾದ 'ಹೋರ್ಮುಜ್ ಕಣಿವೆ'ಯ (Strait of Hormuz) ಸಮುದ್ರ ಸಂಚಾರಕ್ಕೆ ನಿರ್ಬಂಧ ಹೇರಿದೆ. ಪ್ರಪಂಚದ ಒಟ್ಟು ತೈಲ ರಫ್ತಿನ ಬಹುದೊಡ್ಡ ಪಾಲು ಈ ಮಾರ್ಗದಲ್ಲೇ ಸಾಗುತ್ತದೆ. ಈ ಮಾರ್ಗ ಬಂದ್ ಆಗಿರುವುದರಿಂದ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ಖಚಿತ ಎಂದು ನಂಬಿರುವ ಜನರು, ಮುನ್ನೆಚ್ಚರಿಕಾ ಕ್ರಮವಾಗಿ ಪೆಟ್ರೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ.