ಕೆಪಿಸಿಸಿ ಸಾರಥಿ ಡಿಕೆಗೆ 6ರ ಸಂಭ್ರಮ-- ಕಾಂಗ್ರೆಸ್ಸಿಗೆ ಹೊಸ ಶಕ್ತಿ ತುಂಬಿದ ನಾಯಕ
ಕಳೆಗುಂದಿದ್ದ ರಾಜ್ಯ ಕಾಂಗ್ರೆಸ್ಗೆ ಶಕ್ತಿ ನೀಡಿ, ಹೊಸ ಚೈತನ್ಯ ತುಂಬಿದ್ದಲ್ಲದೇ ಸಾಲು-ಸಾಲು ಚುನಾವಣೆ ಗೆಲ್ಲುವ ಮೂಲಕ ಸಂಘಟನಾ ಚತುರ ಎನಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ 1 ಸ್ಥಾನ ಗೆದ್ದು ಕಾಂಗ್ರೆಸ್ ನೀರಸಗೊಂಡಿದ್ದ ಸಂದರ್ಭದಲ್ಲಿ ಅಂದರೆ, 2020ರ ಮಾರ್ಚ್ 11ರಂದು ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ಶಿವಕುಮಾರ್ ಪಕ್ಷದ ಬಲವರ್ಧನೆ, ಕಾರ್ಯಕರ್ತರ ಸಂಘಟನೆ, ಚುನಾವಣಾ ರಣನೀತಿ ಮೂಲಕ ಬೂಸ್ಟ್ ನೀಡಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನ ಗಳಿಸಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ 2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದು ಮುಖಭಂಗ ಅನುಭವಿಸಿತ್ತು.
ಅಂತಹ ಸಮಯದಲ್ಲಿ ಪಕ್ಷದ ಚುಕ್ಕಾಣಿ ಹಿಡಿದು 2023ರ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಬೃಹತ್ ಶಕ್ತಿಯಾಗಿ ನಿಲ್ಲಿಸಿದ್ದರು.
ಪರಿಣಾಮ ಚುನಾವಣೆಗೆ ಮೊದಲೇ 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿ ಅಷ್ಟೇ ಸಂಖ್ಯೆಯನ್ನು ಗೆಲ್ಲುವ ಮೂಲಕ ದೇಶದ ರಾಜಕೀಯ ಲೆಕ್ಕದಲ್ಲಿ ತಾವು ಪಕ್ಕಾ ಎಂದು ನಿರೂಪಿಸಿದ್ದರು.
ಕಾಂಗ್ರೆಸ್ ನಾಯಕರಿಂದ ಸುಳ್ಳು ಪ್ರಚಾರ: ಶಾಸಕ ಕಾಮತ್ ಆಕ್ಷೇಪ
ಜತೆಗೆ 2014ರ ಲೋಕಸಭೆ ಚುನಾವಣೆಯಲ್ಲೂ 9 ಸ್ಥಾನ ಗೆಲ್ಲುವಂತೆ ಮಾಡಲು ಯಶಸ್ವಿಯಾದರು. ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲೂ ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳನ್ನು ಕ್ಲೀನ್ ಸ್ವೀಪ್ ಮಾಡಲು ಪ್ರಮುಖ ಪಾತ್ರ ಪೋಷಿಸಿದರು.
ಪಕ್ಷ ಸಂಘಟನೆಗೆ ಡಿಕೆಶಿ ಹುರುಪು:
ಸಂಘಟನೆ ಬಲಪಡಿಸಿದ ಶಿವಕುಮಾರ್ ಬೂತ್ ಮಟ್ಟದಿಂದ ರಾಜ್ಯದ ಮಟ್ಟದವರೆಗೆ ಸಂಘಟನಾ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಿದರು.
ಸದಸ್ಯತ್ವ ಆಂದೋಲನದ ಮೂಲಕ ಯುವಕರು, ಮಹಿಳೆಯರು ಪಕ್ಷ ಸೇರ್ಪಡೆಗೊಳ್ಳುವಂತೆ ಮಾಡಿ ಪಕ್ಷ ಸಂಘಟನೆಗೆ ಹುರುಪು ನೀಡಿದರು.
ಕೊರೋನಾ ವೇಳೆ ಜನರ ಕಷ್ಟಕ್ಕೆ ಸ್ಪಂದನೆ:
ಕೊರೋನಾ ಅವಧಿಯಲ್ಲಿ ಉಚಿತ ಪ್ರಯಾಣ, ರೈತರಿಂದ ತರಕಾರಿ ಖರೀದಿ ಮಾಡಿ ಸಂತ್ರಸ್ತರಿಗೆ ಹಂಚುವ ಮೂಲಕ ರೈತರು ಹಾಗೂ ಸಂತ್ರಸ್ತರು ಇಬ್ಬರಿಗೂ ನೆರವಾಗುವುದು. ಕೊರೋನಾದಲ್ಲಿ ಚಿಕಿತ್ಸೆ, ಆಕ್ಸಿಜನ್ ಇಲ್ಲದೆ ಪರದಾಡಿದ್ದವರಿಗೆ ಪಕ್ಷದ ಮೂಲಕ ನೆರವಾಗಿದ್ದರು. ಜತೆಗೆ ಕೊರೋನಾ ವೇಳೆಯ ಬಿಜೆಪಿ ವೈಫಲ್ಯಗಳನ್ನು ಎತ್ತಿ ತೋರಿದರು.
ಬಿಜೆಪಿ ವಿರುದ್ಧ ಸರಣಿ ಹೋರಾಟ:
ಕೊರೋನಾ ವೇಳೆ ನಡೆದಿದ್ದ ಅವ್ಯವಹಾರ, 40% ಕಮಿಷನ್, ಪೇ-ಸಿಎಂ ಅಂತಹ ವಿಶಿಷ್ಟ ಹೋರಾಟಗಳ ಮೂಲಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಜನರ ಮುಂದೆ ತೆರೆದಿಟ್ಟರು. ಚಿಲುಮೆ ಮತದಾರರ ಪಟ್ಟಿ ಹಗರಣ, ರೈತರು, ಯುವಕರು ಹಾಗೂ ಉದ್ಯೋಗ ಸಮಸ್ಯೆಗಳ ಬಗ್ಗೆ ಜನಾಂದೋಲನ ರೂಪಿಸಿದ್ದರು.