Tamil Nadu: 4 ದಿನಗಳಲ್ಲಿ ಎಐಎಡಿಎಂಕೆ ಸೀಟು ಹಂಚಿಕೆ ಅಂತಿಮ: ಪಳನಿಸ್ವಾಮಿ ಘೋಷಣೆ
ನವದೆಹಲಿ/ಚೆನ್ನೈ: ತಮಿಳುನಾಡಿನ ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಎಐಎಡಿಎಂಕೆ (AIADMK), ಬಿಜೆಪಿ ಹಾಗೂ ಇತರ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆಯು ಮುಂದಿನ ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಅಧಿಕೃತವಾಗಿ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಶುಕ್ರವಾರ ತಿಳಿಸಿದ್ದಾರೆ. ಅಮಿತ್ ಶಾ ಜೊತೆ ಚರ್ಚೆ
ಗುರುವಾರ ರಾತ್ರಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಪಳನಿಸ್ವಾಮಿ, ತಮಿಳುನಾಡಿನ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೈತ್ರಿಕೂಟದ ಮಾತುಕತೆಗಳು ಅತ್ಯಂತ ಸುಗಮವಾಗಿ ಸಾಗುತ್ತಿವೆ. ಡಿಎಂಕೆ ಮೈತ್ರಿಕೂಟದಲ್ಲಿ ಇರುವಂತಹ ಗೊಂದಲಗಳು ಇಲ್ಲಿಲ್ಲ. ಗೆಲ್ಲುವ ಸಾಧ್ಯತೆ ಹೆಚ್ಚಿರುವ ಕ್ಷೇತ್ರಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡುವುದು ನಮ್ಮ ಉದ್ದೇಶ" ಎಂದರು.
ಪಿಯೂಷ್ ಗೋಯಲ್ ಭೇಟಿ
ಸೀಟು ಹಂಚಿಕೆಯ ಮುಂದಿನ ಹಂತದ ಮಾತುಕತೆಗಾಗಿ ಬಿಜೆಪಿ ತಮಿಳುನಾಡು ಉಸ್ತುವಾರಿ ಪಿಯೂಷ್ ಗೋಯಲ್ ಅವರು ಶನಿವಾರ ಚೆನ್ನೈಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅಂತಿಮ ಸುತ್ತಿನ ಚರ್ಚೆಗಳು ನಡೆಯಲಿವೆ ಎಂದರು.
ವಿಜಯ್ ಪಕ್ಷದ ಜೊತೆ ಮೈತ್ರಿ ಇಲ್ಲ
ನಟ ವಿಜಯ್ ನೇತೃತ್ವದ ಟಿವಿ ಕೆ (TVK) ಪಕ್ಷದೊಂದಿಗೆ ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳನ್ನು ಪಳನಿಸ್ವಾಮಿ ತಳ್ಳಿಹಾಕಿದರು. "ನಾವು ಟಿವಿಕೆ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲಾ ಕೇವಲ ಊಹಾಪೋಹ" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ನಟಿ ನಯನತಾರಾ ವಿರುದ್ಧ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಪಳನಿಸ್ವಾಮಿ, "ತಮ್ಮ ತಪ್ಪಿನ ಅರಿವಾಗಿ ಷಣ್ಮುಗಂ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಕೈಬಿಡುವುದು ಸೂಕ್ತ" ಎಂದರು.