New Train: ಈ ಸೋಮವಾರದಿಂದ ಶುರುವಾಗಲಿದೆ ಹೊಸ ರೈಲು ಸಂಚಾರ, 21 ಬೋಗಿಗಳ ವಿಶೇಷ ಟ್ರೈನ್ ಘೋಷಣೆ!
ಮೈಸೂರು: ನಂಜನಗೂಡಿನ (Nanjanagudu) ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ (Devotees) ಅನುಕೂಲಕ್ಕಾಗಿ ಹಾಗೂ ಸುಪ್ರಸಿದ್ಧ ‘ದೊಡ್ಡ ಜಾತ್ರೆ’ ಮತ್ತು ‘ಪಂಚ ಮಹಾರಥೋತ್ಸವ’ದ ಹಿನ್ನೆಲೆಯಲ್ಲಿ ಮೈಸೂರು ಮತ್ತು ನಂಜನಗೂಡು ನಡುವೆ ವಿಶೇಷ ಕಾಯ್ದಿರಿಸಿದ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ಘೋಷಿಸಲಾಗಿದೆ. ಜಾತ್ರಾ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ಅತಿಯಾದ ದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ಮಾರ್ಚ್ 30 ರಿಂದ ಏಪ್ರಿಲ್ 3 ರವರೆಗೆ ಒಟ್ಟು 5 ಟ್ರಿಪ್ಗಳ ವಿಶೇಷ ಸಂಚಾರ ಲಭ್ಯವಿರಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲುಗಳು ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ ಹಾಗೂ ಸುಜಾತಪುರಂ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ. ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಈ ವಿಶೇಷ ರೈಲಿನಲ್ಲಿ ಒಟ್ಟು 21 ಬೋಗಿಗಳನ್ನು ಅಳವಡಿಸಲಾಗಿದೆ. ಇದು ಕಾಯ್ದಿರಿಸಿದ ಎಕ್ಸ್ಪ್ರೆಸ್ ರೈಲಾಗಿದ್ದು, ಭಕ್ತಾದಿಗಳು ಮತ್ತು ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ರೈಲ್ವೆ ಇಲಾಖೆ ಕೋರಿದೆ.