Tamil Nadu: ಸೀಟುಹಂಚಿಕೆ ಬಗ್ಗೆ ಅಣ್ಣಾಮಲೈ ಅಸಮಾಧಾನ: ಸ್ಪರ್ಧೆ ಮಾಡಲ್ಲ ಎಂದ ಮಾಜಿ ಅಧ್ಯಕ್ಷ
ಚೆನ್ನೈ: ವಿಧಾನಸಭೆ ಚುನಾವಣೆಗೆ ತಮಿಳುನಾಡು ಸಜ್ಜಾಗಿದೆ. ಆದರೆ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಡುವಿನ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ತಮಿಳುನಾಡು ಬಿಜೆಪಿ ಮಾಜಿ ಮುಖ್ಯಸ್ಥ ಕೆ. ಅಣ್ಣಾಮಲೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಐಎಡಿಎಂಕೆ ಶುಕ್ರವಾರ 127 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಪ್ರಮುಖ ವಿಪಕ್ಷ ಈ ವಾರದ ಆರಂಭದಲ್ಲಿ 23 ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿತ್ತು. ಆದರಲ್ಲಿ ಹಿರಿಯ ನಾಯಕರು ಮತ್ತು ಮಾಜಿ ಸಚಿವರು ತಮ್ಮ ಸಾಂಪ್ರದಾಯಿಕ ಭದ್ರಕೋಟೆಗಳಿಂದ ಕಣಕ್ಕಿಳಿದಿದ್ದಾರೆ.
ಇದುವರೆಗೆ ಘೋಷಿಸಲಾದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 150 ಕ್ಕೆ ತಲುಪಿದೆ. ಎರಡನೇ ಪಟ್ಟಿ ಮಾಜಿ ಶಾಸಕರು, ಹಾಲಿ ಶಾಸಕರು ಮತ್ತು ಹೊಸ ಮುಖಗಳನ್ನು ಒಳಗೊಂಡಿದೆ.
ಮೂಲಗಳ ಪ್ರಕಾರ, ಅಣ್ಣಾಮಲೈ ದೆಹಲಿಯಲ್ಲಿರುವ ಪಕ್ಷದ ಕೇಂದ್ರ ನಾಯಕತ್ವಕ್ಕೆ ಪತ್ರ ಬರೆದಿದ್ದು, ಮೈತ್ರಿ ಒಪ್ಪಂದದ ಭಾಗವಾಗಿ ಬಿಜೆಪಿಗೆ ಹಂಚಿಕೆಯಾಗಿರುವ ಕ್ಷೇತ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಿಣತುಕಡವು ಸೇರಿದಂತೆ ಬಿಜೆಪಿಗೆ ಸುಲಭ ಗೆಲುವಿಗೆ ಅನುಕೂಲಕರವೆಂದು ಪರಿಗಣಿಸಲಾದ ಕ್ಷೇತ್ರಗಳನ್ನು ಎಐಎಡಿಎಂಕೆ ಹಂಚಿಕೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.