Kalaburagi: ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ನಲ್ಲಿ ಖಮೇನಿ ಹತ್ಯೆಗೆ ಸಂತಾಪ! ಬಿಜೆಪಿ-ಕಾಂಗ್ರೆಸ್ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹ
ಕಲಬುರಗಿ (ಏ.01): ಅಮೆರಿಕಾ-ಇರಾನ್ (America-Iran) ಯುದ್ಧದ ನಡುವೆ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಹತ್ಯೆಯಾಗಿದ್ದು ಗೊತ್ತೇ ಇದೆ. ಖಮೇನಿ ಹತ್ಯೆಗೆ ಚಿಕ್ಕಬಳ್ಳಾಪುರದ ಅಲಿಪುರದಲ್ಲಿ ಭಾರೀ ಖಂಡನೆ ವ್ಯಕ್ತವಾಗಿತ್ತು. ಕೆಲವೆಡೆ ಪ್ರತಿಭಟನೆಗಳು (Protest) ನಡೆದವು. ಇದೀಗ ಕಲಬುರಗಿ (Kalaburagi) ಮಹಾನಗರ ಪಾಲಿಕೆ ಬಜೆಟ್ಗೂ ಮುನ್ನ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಖಮೇನಿ ಹತ್ಯೆಗೆ ಸಂತಾಪ (Condolences) ಸೂಚಿಸಿದ್ದಾರೆ. ಈ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚ ಆಗ್ತಿದ್ದು, ಪರ-ವಿರೋಧ ಟೀಕೆಗಳು ವ್ಯಕ್ತವಾಗ್ತಿದೆ.
ಖಮೇನಿ ಹತ್ಯೆಗೆ ಸಂತಾಪ
ಕಲಬುರಗಿ ನಗರದ ಟೌನ್ನಲ್ಲಿರುವ ಪಾಲಿಕೆಯ ಕಟ್ಟಡದಲ್ಲಿ ಬಜೆಟ್ ಮಂಡನೆಗೂ ಮುನ್ನ ಇರಾನ್ನ ಪರಮೋಚ್ಚ ನಾಯಕ ಅಯೋತಲ್ಲಾ ಖಮೇನಿ ಹತ್ಯೆಗೆ ಸಂತಾಪ ಸೂಚಿಸಲಾಗಿದೆ. ವಾರ್ಡ್ ನಂಬರ್ 24ರ ಸದಸ್ಯೆ ಸಯೀದಾ ನೂರ್ ಫಾತೀಮಾ ಜೈದಿ ಸಂತಾಪ ಸೂಚಿಸುವ ಬಗ್ಗೆ ನಿರ್ಣಯ ಮಂಡನೆ ಮಾಡಿದ್ರು. ನಿರ್ಣಯ ಮಂಡನೆ ಬಳಿಕ ಪಾಲಿಕೆ ಮೇಯರ್, ಆಯುಕ್ತರು ಸೇರಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಸಂತಾಪ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂತಾಪದ ಬಗ್ಗೆ ಪರ-ವಿರೋಧ ಚರ್ಚೆ
ಕಲಬುರಗಿಯ ಮಹಾನಗರ ಪಾಲಿಕೆ ಮೇಯರ್, ಆಯುಕ್ತರು ಸೇರಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಸಂತಾಪ ಸಲ್ಲಿಸಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿದೆ. ದೇಶದ ಯಾವ ಸಂಸತ್ ಅಧಿವೇಶಗಳಲ್ಲೂ ನಡೆಯದ ಸಂತಾಪ ಸಭೆ ಕಲಬುರಗಿಯಲ್ಲಿ ಯಾಕೆ ಎಂದು ಅನೇಕರು ಪ್ರಶ್ನೆ ಮಾಡ್ತಿದ್ದಾರೆ.