ತಮಿಳುನಾಡಿನಲ್ಲಿ ಹಿಂಸಾಚಾರ ಸೃಷ್ಟಿಸಲು ಬಿಜೆಪಿ ಸಂಚು ರೂಪಿಸುತ್ತಿದೆ: ಸ್ಟಾಲಿನ್
ತಿರುಚಿರಾಪಳ್ಳಿ: ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಗಲಭೆ ಮಾಡಿದಂತೆ, ತಮಿಳುನಾಡಿನಲ್ಲೂ ಹಿಂಸಾಚಾರ ಸೃಷ್ಟಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬುಧವಾರ(ಏ.1) ಆರೋಪಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಡಿಎಂಕೆ ರ್ಯಾಲಿಯಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಅವರು ಬಿಜೆಪಿ ವಿರುದ್ಧ ಮಾತನಾಡಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿರುವಂತೆ ತಮಿಳುನಾಡಿನಲ್ಲಿ ಯಾವುದೇ ಜಾತಿ ಗಲಭೆ, ಕೋಮು ಹಿಂಸಾಚಾರವಿಲ್ಲ. ಅವರು ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಗುಂಪು ಹಿಂಸಾಚಾರಗಳು ನಡೆಯುತ್ತಿವೆ, ಮಣಿಪುರದಲ್ಲಿನ ಸಂಘರ್ಷವು ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ.
ಅದೇ ರೀತಿಯ ಹಿಂಸಾಚಾರವನ್ನು ತಮಿಳುನಾಡಿನಲ್ಲಿ ನಡೆಸಲು ಬಿಜೆಪಿ ಪ್ರಯತ್ನಿಸಿತ್ತು, ಆದರೆ ನಮ್ಮ ಪಕ್ಷವು ಅದನ್ನು ತಡೆದಿದೆ ಎಂದು ಹೇಳಿದ್ದಾರೆ. ‘ಡಿಎಂಕೆ ಮತ್ತೆ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿನ ಮಹಿಳೆಯರಿಗೆ ₹8000 ಮೊತ್ತದ ಕೂಪನ್ ಕೊಡಲಾಗುತ್ತದೆ. ಅದನ್ನು ಬಳಸಿಕೊಂಡು ಅವರು, ಅವರಿಗೆ ಇಷ್ಟ ಬಂದ ಅಂಗಡಿಯಲ್ಲಿ ಗೃಹೋಪಯೋಗಿ ಉಪಕರಣಗಳನ್ನು ಕೊಂಡುಕೊಳ್ಳಬಹುದು. ಮಹಿಳೆಯರಿಗೆ ನೀಡಲಾಗುತ್ತಿರುವ ಮಾಸಿಕ ನೆರವನ್ನು ₹2000 ಸಾವಿರಕ್ಕೆ ಹೆಚ್ಚು ಮಾಡಲಾಗುತ್ತದೆ, ಉನ್ನತ ಶಿಕ್ಷಣಕ್ಕಾಗಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಮಾಸಿಕ ನೆರವನ್ನು ₹1,500ಕ್ಕೆ ಏರಿಕೆ ಮಾಡಲಾಗುತ್ತದೆ ’ ಎಂದು ಭರವಸೆ ನೀಡಿದ್ದಾರೆ.