ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸುವುದಕ್ಕಲ್ಲ: AAPಗೆ ಛಡ್ಡಾ ತಿರುಗೇಟು
ನವದೆಹಲಿ: 'ನಾನು ಸಂಸತ್ತಿಗೆ ಹೋಗುವುದು ಜನರ ಸಮಸ್ಯೆಗಳ ಪರ ಧ್ವನಿ ಎತ್ತುವುದಕ್ಕೇ ಹೊರತು, ಗದ್ದಲ ಸೃಷ್ಟಿಸುವುದಕ್ಕಲ್ಲ' ಎಂದು ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಶನಿವಾರ ಹೇಳಿದ್ದಾರೆ. ಪ್ರತಿಪಕ್ಷಗಳ ವಾಕ್ಔಟ್ನಲ್ಲಿ ತಾವು ಭಾಗವಹಿಸಿಲ್ಲ ಎಂಬ ಎಎಪಿ ಆರೋಪವನ್ನು ಛಡ್ಡಾ ನಿರಾಕರಿಸಿದ್ದು, ಈ ಎಲ್ಲಾ ಆರೋಪಗಳು ಶುದ್ಧ ಸುಳ್ಳು ಎಂದು ಕಿಡಿಕಾರಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ ನಿರ್ಣಯಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂಬ ಮತ್ತೊಂದು ಆರೋಪವನ್ನು ನಿರಾಕರಿಸಿದ ಛಡ್ಡಾ, ಸಹಿ ಹಾಕುವಂತೆ ಯಾವುದೇ ಪಕ್ಷದ ನಾಯಕರು ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ಕೇಳಿಕೊಂಡಿಲ್ಲ. ತಮ್ಮ ಪಕ್ಷದ ಇತರ ಹಲವಾರು ಸಂಸದರು ಸಹ ನಿರ್ಣಯಕ್ಕೆ ಸಹಿ ಹಾಕಿಲ್ಲ ಎಂದು ಅವರು ಹೇಳಿದ್ದಾರೆ.
ಸಂಸತ್ತಿನಲ್ಲಿ ಜಿಎಸ್ಟಿ, ಆದಾಯ ತೆರಿಗೆ, ದೆಹಲಿಯಲ್ಲಿ ವಾಯು ಮಾಲಿನ್ಯ, ಪಂಜಾಬ್ನಲ್ಲಿ ನೀರಿನ ಕಾಳಜಿ, ಸಾರ್ವಜನಿಕ ಆರೋಗ್ಯ ರಕ್ಷಣೆ, ಶಿಕ್ಷಣ, ರೈಲ್ವೆ ಪ್ರಯಾಣಿಕರ ಸಮಸ್ಯೆಗಳು, ಮುಟ್ಟಿನ ಆರೋಗ್ಯ, ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಾರ್ವಜನಿಕ ಸಮಸ್ಯೆಗಳತ್ತ ಧ್ವನಿ ಎತ್ತುವತ್ತ ನನ್ನ ಗಮನವಿದೆ ಎಂದು ಛಡ್ಡಾ ತಿಳಿಸಿದ್ದಾರೆ . ಸಂಸತ್ತು ತೆರಿಗೆದಾರರ ಹಣದಿಂದ ನಡೆಯುತ್ತದೆ. ಹಾಗಾಗಿ ಅಲ್ಲಿ ಗದ್ದಲ ಮಾಡುವುದಕ್ಕಿಂತ ಜನರ ಧ್ವನಿಯಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಪ್ರತಿಯೊಂದು ಸುಳ್ಳು ಶೀಘ್ರದಲ್ಲೇ ಬಯಲಾಗಲಿದೆ ಎಂದು ಛಡ್ಡಾ ಗುಡುಗಿದ್ದಾರೆ.
ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಿದ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷವು (ಎಎಪಿ) ಛಡ್ಡಾ ವಿರುದ್ಧ ವಾಗ್ದಾಳಿ ನಡೆಸಿದೆ.