ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ: ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್
ದಾವಣಗೆರೆ: ‘ವೈಯಕ್ತಿಕವಾಗಿ ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದಲ್ಲಿನ ಕೆಲವು ವ್ಯಕ್ತಿಗಳು ಹೈಕಮಾಂಡ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದರು. ‘ಅಭ್ಯರ್ಥಿ, ಸಚಿವರು, ಸಂಸದರು ಸೌಜನ್ಯಕ್ಕಾದರೂ ನನ್ನ ಪ್ರಚಾರಕ್ಕೆ ಕರೆದಿಲ್ಲ. ಅದರೂ, ಪ್ರಚಾರ ಮಾಡುತ್ತಿದ್ದೇನೆ. ಆರೋಗ್ಯ ಸರಿ ಇಲ್ಲದ ಕಾರಣ ಬಹಿರಂಗ ಪ್ರಚಾರಕ್ಕೆ ಹೋಗುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರು ಶುಕ್ರವಾರ ಕರೆ ಮಾಡಿ ಪತ್ರಿಕಾಗೋಷ್ಠಿ ನಡೆಸುವಂತೆ ಹೇಳಿದ್ದರು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
‘ಪಕ್ಷದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ನಾವು ಸತತವಾಗಿ ಶ್ರಮಿಸುತ್ತಿದ್ದೇವೆ. ಪಕ್ಷದ ವಿಚಾರದಲ್ಲಿ ನಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ, ಮುಂದೆಯೂ ಆಗುವುದಿಲ್ಲ’ ಎಂದು ಹೇಳಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ನಾವು ಪಕ್ಷದ ಹಿತದೃಷ್ಟಿಯಿಂದ ಹಾಗೂ ಸಾಮಾಜಿಕ ಹೋರಾಟದ ಹಾದಿಯಲ್ಲಿ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ’ ಎಂದು ಕಾಂಗ್ರೆಸ್ ಮುಖಂಡ ಎನ್.ಟಿ.ಸುಭಾಷ್ಚಂದ್ರ ಹೇಳಿದರು. ‘ಅಬ್ದುಲ್ ಜಬ್ಬಾರ್ ಪರವಾಗಿ ನಾವು ನಡೆಸುತ್ತಿರುವ ಈ ಹೋರಾಟ ವೈಯಕ್ತಿಕವಲ್ಲ, ಇದು ಇಡೀ ಸಮಾಜದ ಧ್ವನಿಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ರಾಜಕೀಯ ನಡವಳಿಕೆ ಹೇಗಿರಲಿದೆ ಎಂಬುದನ್ನು ಎಲ್ಲರೂ ಗಮನಿಸಲಿದ್ದಾರೆ. ನಾವು ಪಕ್ಷದ ವಿರುದ್ಧವಾಗಿ ಯಾವುದನ್ನೂ ಮಾಡುತ್ತಿಲ್ಲ. ಬದಲಾಗಿ ಪಕ್ಷದ ಬಲವರ್ಧನೆಗಾಗಿ ಹಕ್ಕೊತ್ತಾಯ ಮಾಡಿದ್ದೆವು’ ಎಂದು ಸ್ಪಷ್ಟಪಡಿಸಿದರು.
ಮುಖಂಡರಾದ ಸಿರಾಜ್ ಅಹ್ಮದ್, ಘನಿ ತಾಹೀರ್ ಇದ್ದರು.