ಇಸ್ರೇಲ್ ವಿನಾಶಕ್ಕೆ ಪಾಕ್ ಸಚಿವ ಕರೆ: ಸಹಿಸಲು ಸಾಧ್ಯವಿಲ್ಲ ಎಂದ ನೆತನ್ಯಾಹು
ಟೆಲ್ ಅವಿವ್: ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನದ ತಟಸ್ಥ ನಿಲುವನ್ನು ಪ್ರಶ್ನಿಸಿರುವ ಇಸ್ರೇಲ್, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಮೂಲಕ ತಿರುಗೇಟು ನೀಡಿದೆ. ‘ಇಸ್ರೇಲ್ ವಿನಾಶಕ್ಕೆ ಪಾಕ್ ರಕ್ಷಣಾ ಸಚಿವರು ಕರೆ ನೀಡಿರುವುದು ಅತ್ಯಂತ ಅಸಹನೀಯ. ಯಾವುದೇ ದೇಶ ಅಥವಾ ಸರ್ಕಾರದಿಂದ ಇಂತಹ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಶಾಂತಿಗಾಗಿ ತಟಸ್ಥ ಸಂಧಾನಕಾರ ಎಂದು ಹೇಳಿಕೊಳ್ಳುವವರಿಂದ ಇಂತಹ ಮಾತುಗಳು ಬರಲೇ ಬಾರದು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗಿದ್ದಾರೆ.
‘ಇಸ್ರೇಲ್ ಒಂದು ದುಷ್ಟ ಶಕ್ತಿ ಮತ್ತು ಮಾನವಕುಲಕ್ಕೆ ಶಾಪವಾಗಿದೆ. ಇಸ್ಲಾಮಾಬಾದ್ನಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿರುವಾಗಲೇ ಲೆಬನಾನ್ನಲ್ಲಿ ನರಮೇಧ ನಡೆಯುತ್ತಿದೆ. ಮೊದಲು ಗಾಜಾ, ನಂತರ ಇರಾನ್...ಈಗ ಲೆಬನಾನ್ನಲ್ಲಿ ಇಸ್ರೇಲ್ನಿಂದ ಅಮಾಯಕ ನಾಗರಿಕರ ಕೊಲೆಯಾಗುತ್ತಿದೆ. ರಕ್ತಪಾತವು ಅವಿರತವಾಗಿ ಮುಂದುವರೆದಿದೆ’ ಎಂದು ಖವಾಜಾ ಆಸಿಫ್ ದೂಷಿಸಿದ್ದರು.
‘ಯುರೋಪಿಯನ್ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ಟೀನ್ ಭೂಮಿಯಲ್ಲಿ ಈ ‘ಕ್ಯಾನ್ಸರ್ಕಾರಕ ರಾಷ್ಟ್ರ’ವನ್ನು (ಇಸ್ರೇಲ್) ಸೃಷ್ಟಿಸಿದವರು ನರಕದಲ್ಲಿ ಉರಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದೂ ಆಸಿಫ್ ಕಿಡಿಕಾರಿದ್ದರು. ಅಮೆರಿಕ–ಇರಾನ್ ನಡುವಿನ ಕದನ ವಿರಾಮ ಕುರಿತಂತೆ ಇಸ್ಲಾಮಾಬಾದ್ನಲ್ಲಿ ಮಾತುಕತೆ ಆರಂಭವಾಗುವ ಮೊದಲೇ ಪಾಕಿಸ್ತಾನದ ರಕ್ಷಣಾ ಸಚಿವರ ಈ ಹೇಳಿಕೆಯು ಈಗಿರುವ ಕದನ ವಿರಾಮವನ್ನು ಮತ್ತಷ್ಟು ಅಪಾಯಕ್ಕೆ ಸಿಲುಕಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮದ ನಿಯಮಗಳನ್ನು ಸ್ಪಷ್ಟವಾಗಿ ವಿವರಿಸುವಲ್ಲಿ ಪಾಕಿಸ್ತಾನವು ಈಗಾಗಲೇ ಎಡವಟ್ಟು ಮಾಡಿಕೊಂಡಿದೆ. ಇದೀಗ ಇಸ್ರೇಲ್ ಕುರಿತಾದ ಆಸಿಫ್ ಹೇಳಿಕೆಯು ಪಾಕ್ಗೆ ಮತ್ತಷ್ಟು ಮುಜುಗರ ಉಂಟುಮಾಡಿದೆ.
ಲೆಬನಾನ್ ಕೂಡ ಈ ಶಾಂತಿ ಒಪ್ಪಂದದ ಭಾಗವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಹಿಂದೆ ಹೇಳಿದ್ದರು. ಆದರೆ, ಈ ವಾದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಇಬ್ಬರೂ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಈ ಮಧ್ಯೆ, ಲೆಬನಾನ್ನಲ್ಲಿ ಯಾವುದೇ ಕದನ ವಿರಾಮವಿಲ್ಲ ಎಂದು ಪುನರುಚ್ಚರಿಸಿರುವ ನೆತನ್ಯಾಹು, ಹಿಜ್ಬುಲ್ಲಾ ವಿರುದ್ಧ ಪೂರ್ಣ ಶಕ್ತಿಯೊಂದಿಗೆ ಸೇನಾ ಕಾರ್ಯಾಚರಣೆ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.