ಕೊಪ್ಪಳ ಜಿಲ್ಲೆಯಲ್ಲಿ ಬಿರುಬಿಸಿಲು: ಅಂಜನಾದ್ರಿ ದರ್ಶನ ಸಮಯ ಬದಲು
ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದರ್ಶನ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಆದೇಶಿಸಿದ್ದಾರೆ. ಏಪ್ರಿಲ್ ಮತ್ತು ಮೇ ತನಕ ಬೆಳಿಗ್ಗೆ 6 ಗಂಟೆಯಿಂದ 11ರ ತನಕ ಹಾಗೂ ಸಂಜೆ 4ರಿಂದ 6ರ ತನಕ ಮಾತ್ರ ದರ್ಶನಕ್ಕೆ ಸಮಯ ಕಲ್ಪಿಸಲಾಗಿದೆ. ಉಳಿದ ಸಮಯದಲ್ಲಿ ದೇವಸ್ಥಾನ ಬಂದ್ ಮಾಡಲಾಗಿರುತ್ತದೆ.
ಹನುಮ ಜನಿಸಿದ ನಾಡು ಎಂದು ಖ್ಯಾತಿ ಪಡೆದಾಗಿನಿಂದ ಅಂಜನಾದ್ರಿಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಅದರಲ್ಲಿಯೂ ವಾರಾಂತ್ಯದ ದಿನಗಳಲ್ಲಿ ಜನಸಂದಣಿ ನಿರ್ವಹಣೆ ಕಷ್ಟವಾಗುತ್ತಿದೆ. ಎರಡ್ಮೂರು ತಿಂಗಳಲ್ಲಿ ಬೆಟ್ಟದ 575 ಮೆಟ್ಟಿಲುಗಳನ್ನು ಏರುವಾಗ ಕುಸಿದು ಮೃತಪಟ್ಟ ಘಟನೆಗಳು ನಡೆದಿದ್ದವು. ಏಪ್ರಿಲ್ 1ರಂದು ಮಧ್ಯಾಹ್ನ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತನೊಬ್ಬ ಗರ್ಭಗುಡಿಯಲ್ಲಿ ಕುಳಿತು ದರ್ಶನ ಮುಗಿಸುತ್ತಿದ್ದಂತೆ ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ಮೃತಪಟ್ಟಿದ್ದರು. ಆದ್ದರಿಂದ ಅಂಜನಾದ್ರಿ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ.