₹64ರಿಂದ ಪೆಟ್ರೋಲ್ಗಿಂತ ಹೆಚ್ಚಾಗಿ ₹152ಕ್ಕೆ ತಲುಪಿದ ಸೀಮೆಎಣ್ಣೆ ಬೆಲೆ; ಸಮುದ್ರಕ್ಕಿಳಿಯದೇ ಲಂಗರು ಹಾಕಿದ ದೋಣಿಗಳು!
ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಯುದ್ಧದ ಪರಿಣಾಮಗಳು ಸಾಮಾನ್ಯ ಜನರ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ಕಾರವಾರದ ಮೀನುಗಾರರ ಸ್ಥಿತಿಯೇ ಸಾಕ್ಷಿ. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧವು ಈಗ ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಮೀನುಗಾರರ ಹೊಟ್ಟೆಯ ಮೇಲೆ ಹೊಡೆದಿದೆ. ಮೀನುಗಾರಿಕೆಗೆ ಅತಿ ಅಗತ್ಯವಾಗಿರುವ ಸೀಮೆಎಣ್ಣೆ ದರವು ಪೆಟ್ರೋಲ್ಗಿಂತಲೂ ದುಬಾರಿಯಾಗಿದ್ದು, ಮೀನುಗಾರರು ಅಕ್ಷರಶಃ ಕಂಗಾಲಾಗಿದ್ದಾರೆ.
ಪೆಟ್ರೋಲ್ಗಿಂತ ಸೀಮೆಎಣ್ಣೆಯೇ ತುಟ್ಟಿ! ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿಗಳ ಇಂಜಿನ್ ಓಡಿಸಲು ಸೀಮೆಎಣ್ಣೆಯನ್ನು ಅವಲಂಬಿಸಿದ್ದಾರೆ. ಯುದ್ಧ ಆರಂಭವಾಗುವ ಮೊದಲು ಪ್ರತಿ ಲೀಟರ್ಗೆ ಸುಮಾರು 64 ರೂಪಾಯಿ ಇದ್ದ ಸೀಮೆಎಣ್ಣೆ ದರವು ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಈಗ ಗಗನಕ್ಕೇರಿದೆ. ಸದ್ಯ ಮಾರುಕಟ್ಟೆಯಲ್ಲಿ ಸೀಮೆಎಣ್ಣೆಯ ಬೆಲೆ ಪ್ರತಿ ಲೀಟರ್ಗೆ ಬರೋಬ್ಬರಿ 152 ರೂಪಾಯಿ ತಲುಪಿದೆ. ಇದು ವಾಡಿಕೆಯ ಪೆಟ್ರೋಲ್ ದರಕ್ಕಿಂತಲೂ ಅಧಿಕವಾಗಿರುವುದು ಮೀನುಗಾರರ ನಿದ್ದೆಗೆಡಿಸಿದೆ.
ಸಬ್ಸಿಡಿ ಇದ್ದರೂ ಆರ್ಥಿಕ ಹೊರೆ ತಪ್ಪಿಲ್ಲ: ಮೀನುಗಾರರ ಸಂಕಷ್ಟವನ್ನು ಅರಿತ ಸರ್ಕಾರವು ಪ್ರತಿ ಲೀಟರ್ಗೆ 35 ರೂಪಾಯಿ ಸಬ್ಸಿಡಿ (ರಿಯಾಯಿತಿ) ನೀಡುತ್ತಿದೆ. ಈ ಸಬ್ಸಿಡಿ ಕಳೆದು ಮೀನುಗಾರರಿಗೆ ಸದ್ಯ ಒಂದು ಲೀಟರ್ ಸೀಮೆಎಣ್ಣೆ 117 ರೂಪಾಯಿಗೆ ಸಿಗುತ್ತಿದೆ. ಆದರೆ, ಈ ಹಿಂದೆ 60-70 ರೂಪಾಯಿಗೆ ಸಿಗುತ್ತಿದ್ದ ಇಂಧನಕ್ಕೆ ಈಗ 117 ರೂಪಾಯಿ ನೀಡುವುದು ಸಣ್ಣ ಪ್ರಮಾಣದ ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ. ಒಂದು ಬಾರಿ ಸಮುದ್ರಕ್ಕೆ ಹೋಗಿ ಬರಲು ಲೀಟರ್ಗಟ್ಟಲೆ ಇಂಧನ ಬೇಕಾಗುತ್ತದೆ, ಆದರೆ ಹಿಡಿದ ಮೀನುಗಳಿಂದ ಬರುವ ಆದಾಯವು ಇಂಧನದ ಖರ್ಚಿಗೂ ಸಾಲುತ್ತಿಲ್ಲ.