ಬಂಗಾಳದಲ್ಲಿ 'ದೀದಿ' ಆಟ ಮುಗಿಯಿತು: 152ರಲ್ಲಿ 110 ಸ್ಥಾನ ಗೆಲ್ಲಲಿದ್ದೇವೆ: ಅಮಿತ್ ಶಾ ಭವಿಷ್ಯ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ಭವಿಷ್ಯ ನುಡಿದಿದ್ದಾರೆ. "ಬಂಗಾಳದಲ್ಲಿ ದೀದಿ (ಮಮತಾ ಬ್ಯಾನರ್ಜಿ) ಆಡಳಿತ ಅಂತ್ಯವಾಗಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಮತದಾನ ನಡೆದ 152 ಕ್ಷೇತ್ರಗಳ ಪೈಕಿ 110ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಹೇಳಿದರು. ಭರ್ಜರಿ ಮತದಾನ: ಮೊದಲ ಹಂತದಲ್ಲಿ ದಾಖಲೆಯ ಶೇ. 91.88 ರಷ್ಟು ಮತದಾನವಾಗಿದ್ದು, ಇದು ಬದಲಾವಣೆಯ ಗಾಳಿಯನ್ನು ಸೂಚಿಸುತ್ತಿದೆ.
ಮೇ 5ರ ನಂತರ ಪೂರ್ವ ಭಾರತದ ಅಂಗ, ಬಂಗ ಮತ್ತು ಕಳಿಂಗ ಪ್ರದೇಶಗಳಲ್ಲಿ ಕಮಲ ಅರಳಲಿದೆ ಎಂದು ಶಾ ಭವಿಷ್ಯ ನುಡಿದರು. "ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಮಣ್ಣಿನ ಮಗನೇ ಮುಖ್ಯಮಂತ್ರಿಯಾಗಲಿದ್ದಾರೆ. ಹೊರಗಿನವರು ಆಳ್ವಿಕೆ ನಡೆಸುತ್ತಾರೆ ಎಂಬ ದೀದಿ ಅವರ ಸುಳ್ಳು ಆರೋಪಗಳಿಗೆ ಕಿವಿಗೊಡಬೇಡಿ" ಎಂದು ಜನರಿಗೆ ಭರವಸೆ ನೀಡಿದರು. ಎರಡನೇ ಹಂತದ ಮತದಾನದ ವೇಳೆಗೆ ಬಿಜೆಪಿ ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲವನ್ನು ಬಹುತೇಕ ತಲುಪಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನ ಏಪ್ರಿಲ್ 29 ರಂದು ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.