DK Shivakumar: ಮತ್ತೆ ಡಿಕೆ ಶಿವಕುಮಾರ್ ಮಾರ್ಮಿಕ ನುಡಿ, ಮಧ್ಯರಂಗನ ದರ್ಶನದ ಬಳಿಕ ಡಿಸಿಎಂ ಏನಂದ್ರು?
ಚಾಮರಾಜನಗರ (ಮೇ.21): ಜೀರ್ಣೋದ್ಧಾರಗೊಂಡ ಶಿವನಸಮುದ್ರದ ಮದ್ಯರಂಗನಾಥ ಸ್ವಾಮಿ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ಭಾಗಿಯಾಗಿದ್ರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದ ಡಿಕೆಶಿ, ರಾಜಕಾರಣದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ನಂಬಿಕೆ ಇದೆ. ಆದ್ರೆ ಎಲ್ಲಿ ಭಕ್ತಿ (Devotion) ಇರುತ್ತೋ ಅಲ್ಲಿ ಭಗವಂತ ಇರ್ತಾನೆ ಎಂದ ಡಿಸಿಎಂ ಗುರಿ ಮುಟ್ಟುವ ಬಗ್ಗೆ ಮಾರ್ಮಿಕವಾಗಿ ಮಾತಾಡಿದ್ದಾರೆ.
ಇದೇ ವೇಳೆ ಮಾತಾಡಿದ ಡಿಕೆ ಶಿವಕುಮಾರ್ ಅವ್ರು, ಚಾಮರಾಜನಗರ ಹಿಂದುಳಿದ ಜಿಲ್ಲೆಯಲ್ಲ. ಇದು ದೇವರ ನಾಡು ಎಂದಿದ್ದಾರೆ. ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ, ಮಧ್ಯರಂಗ, ಸಿದ್ದಪ್ಪಾಜಿ ನೆಲೆಸಿರುವ ಪುಣ್ಯ ಕ್ಷೇತ್ರ. ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳವೇ ದೇವಾಲಯ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆದಿರಂಗ, ಮಧ್ಯರಂಗ, ಅಂತ್ಯರಂಗವನ್ನು ಒಂದೇ ದಿನದಲ್ಲಿ ದರ್ಶನ ಮಾಡಿದ್ರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇದೆ. ನಾನು ಕೂಡ ಪ್ರಯತ್ನ ಮಾಡಿದ್ದೇನೆ. ದೇವರು ಕಷ್ಟವನ್ನು ಕೊಡ್ತಾನೆ, ನಿವಾರಿಸುವ ಶಕ್ತಿಯನ್ನ ಕೂಡ ಕೊಡ್ತಾನೆ. ದೇವರು ವರ, ಶಾಪ ಎರಡನ್ನೂ ಕೊಡಲ್ಲ ಅವಕಾಶ ಕೊಡ್ತಾನೆ. ಎಲ್ಲರೂ ಅವಕಾಶ ಬಳಸಿಕೊಳ್ಳಬೇಕು. ದಾರಿ ತೋರಿಸೋದು ದೇವರ ಕೆಲಸ, ಗುರಿ ತಲುಪೋದು ನಮ್ಮ ಕೆಲಸ ಎಂದ್ರು ಡಿಕೆಶಿ.
ಇನ್ನು ಮಧ್ಯರಂಗನ ಪಾದದಿಂದ ಹಣೆಯ ಭಾಗದವರೆಗೂ ದರ್ಶನ ಮಾಡಿ ಆಶೀರ್ವಾದ ಬೇಡಿದ್ದೇನೆ ಎಂದು ಡಿಕೆಶಿ ಹೇಳಿದ್ದು, ಸಿಎಂ ಸ್ಥಾನಕ್ಕಾಗಿಯೇ ಡಿಕೆ ಶಿವಕುಮಾರ್ ಅವರು ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ.