ಸಚಿನ್ ಪೈಲಟ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ…ಅಶೋಕ್ ಗೆಹ್ಲೋಟ್ ಹೇಳಿದ್ದೇನು?
ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ರಾಜಸ್ಥಾನ ಕಾಂಗ್ರೆಸ್ನಲ್ಲಿ ಸಚಿನ್ ಪೈಲಟ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. 2020ರ ಮಾನೇಸರ್ ಘಟನೆ ತಪ್ಪನ್ನು ಪೈಲಟ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರೆ, ಬಿಜೆಪಿ ಕಾಂಗ್ರೆಸ್ ಅನ್ನು ಕೆಣಕಲು ಅವಕಾಶ ಸಿಗುತ್ತಿರಲಿಲ್ಲ ಎಂದಿದ್ದಾರೆ. ಪಕ್ಷದ ಭವಿಷ್ಯಕ್ಕೆ ಹಳೆಯ ಕಹಿ ನೆನಪು ಮರೆತು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ.
ಜೈಪುರ, ಜೂನ್ 08: ರಾಜಸ್ಥಾನ(Rajasthan) ರಾಜಕಾರಣದಲ್ಲಿ ಸುಡು ಬಿಸಿಲಿನಂತೆಯೇ ರಾಜಕೀಯ ಉಷ್ಣತೆಯೂ ಗಣನೀಯವಾಗಿ ಹೆಚ್ಚಾಗಿದೆ. 2020ರ ಕೋವಿಡ್ 19 ಸಾಂಕ್ರಾಮಿಕ ರೋಗದ ಸಮಯದಲ್ಲಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ರಾಜಸ್ಥಾನ ಕಾಂಗ್ರೆಸ್ನ ಮಾನೇಸರ್ ರೆಸಾರ್ಟ್ ಘಟನೆಯು ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಕುರಿತು ಜೂನ್ 7ರ ಭಾನುವಾರದಂದು ಜೈಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ತಮ್ಮದೇ ಪಕ್ಷದ ಸಹೋದ್ಯೋಗಿ ಸಚಿನ್ ಪೈಲಟ್ ವಿರುದ್ಧ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
ಸಚಿನ್ ಪೈಲಟ್ ಅವರು ಅಂದು ತಾವು ಮಾಡಿದ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರೆ, ವಿರೋಧ ಪಕ್ಷವಾದ ಬಿಜೆಪಿಗೆ ಈ ಮಾನೇಸರ್ ಘಟನೆಯ ವಿಷಯವನ್ನು ಪದೇ ಪದೇ ಕಾಂಗ್ರೆಸ್ ಅನ್ನು ಕೆಣಕಲು ಯಾವುದೇ ಅವಕಾಶ ಸಿಗುತ್ತಿರಲಿಲ್ಲ ಎಂದು ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. ಸೆಪ್ಟೆಂಬರ್ 25, 2022 ರಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯ ಬಹಿಷ್ಕಾರದ ವಿವಾದವನ್ನು ಪ್ರಸ್ತಾಪಿಸಿದ ಗೆಹ್ಲೋಟ್, ಆ ಸಮಯದಲ್ಲಿ ಹೈಕಮಾಂಡ್ ವಿರುದ್ಧ ಯಾವುದೇ ಬಂಡಾಯ ಅಥವಾ ಅಸಮಾಧಾನ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಅದು ಕೇವಲ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸುವ ಪ್ರಸ್ತಾಪದ ವಿರುದ್ಧ ಶಾಸಕರು ವ್ಯಕ್ತಪಡಿಸಿದ ತೀವ್ರ ಭಿನ್ನಾಭಿಪ್ರಾಯವಾಗಿತ್ತು ಎಂದು ಅವರು ವಿವರಿಸಿದರು.