Select Location
All Locations
State
Region
City / District
ಹಿಂದಿಯನ್ನು ರಾಜ ಭಾಷೆ ಎಂದು ಕರೆದ ಪವನ್ ಕಲ್ಯಾಣ್; ಕೇಳಿ ಬಂತು ಟೀಕೆ

ಹಿಂದಿಯನ್ನು ರಾಜ ಭಾಷೆ ಎಂದು ಕರೆದ ಪವನ್ ಕಲ್ಯಾಣ್; ಕೇಳಿ ಬಂತು ಟೀಕೆ

ಪವನ್ ಕಲ್ಯಾಣ್ ಅವರ 'ಹಿಂದಿ ರಾಜ ಭಾಷೆ' ಹೇಳಿಕೆ ದಕ್ಷಿಣ ಭಾರತದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಹಿಂದೆ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಪವನ್, ಈಗ ತಮ್ಮ ನಿಲುವನ್ನು ಬದಲಾಯಿಸಿರುವುದಕ್ಕೆ ಪ್ರಾದೇಶಿಕ ಭಾಷಾ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ ಎಂಬ ಸಂವಿಧಾನದ ನಿಯಮವನ್ನು ನೆನಪಿಸುತ್ತಾ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಜನಸೇನಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಹೊಸ ಹೇಳಿಕೆಯೊಂದು ದಕ್ಷಿಣ ಭಾರತದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ‘ಹಿಂದಿ ಹೇರಿಕೆ’ಯನ್ನು ವಿರೋಧಿಸುತ್ತಿದ್ದ ಪವನ್, ಈಗ ಇದ್ದಕ್ಕಿದ್ದಂತೆ ಹಿಂದಿ ಭಾಷೆಯ ಪರವಾಗಿ ಬ್ಯಾಟ್ ಬೀಸಿರುವುದು ಪ್ರಾದೇಶಿಕ ಭಾಷಾ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದ, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಸಭೆಯಲ್ಲಿ ಹೇಳಿಕೆ

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್, ತೆಲುಗು ಬಿಟ್ಟು ಹಿಂದಿಯಲ್ಲಿ ಭಾಷಣ ಮಾಡಲು ಆರಂಭಿಸಿದರು. ಇದಕ್ಕೆ ಕಾರಣ ನೀಡಿದ ಅವರು, ‘ನಾನು ಹಿಂದಿಯಲ್ಲಿ ಏಕೆ ಮಾತನಾಡುತ್ತಿದ್ದೇನೆ ಎಂದರೆ, ನಾವೆಲ್ಲರೂ ಗೌರವಿಸುವ, ಆದರಿಸುವ ಭಾಷೆ ಅದು. ನಮ್ಮ ರಾಷ್ಟ್ರೀಯ ಭಾಷೆಗಳಲ್ಲಿ ಒಂದಾದ ನಮ್ಮ ಭಾಷೆ, ರಾಜಭಾಷೆ ಹಿಂದಿ. ನಮ್ಮ ಭಾಷೆಗಳು ಭಿನ್ನವಾಗಿದ್ದರೂ, ನಮ್ಮ ಭಾವನೆ ಹಾಗೂ ಭಾರತೀಯತೆ ಒಂದೇ’ ಎಂದು ಪ್ರತಿಪಾದಿಸಿದರು.

ಈ ಹಿಂದಿನ ನಿಲುವು ಏನಿತ್ತು?

ರಾಜಕೀಯಕ್ಕೆ ಬರುವ ಮುನ್ನ ಹಾಗೂ ಆರಂಭದ ದಿನಗಳಲ್ಲಿ ಪವನ್ ಕಲ್ಯಾಣ್ ದಕ್ಷಿಣ ಭಾರತದ ಭಾಷೆಗಳ ಮೇಲಿನ ಹಿಂದಿ ಹೇರಿಕೆಯನ್ನು ಬಲವಾಗಿ ಖಂಡಿಸುತ್ತಿದ್ದರು. ‘ಉತ್ತರ ಭಾರತದ ನಾಯಕರು ದಕ್ಷಿಣದವರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನೋಡಬಾರದು. ನಮಗೆ ನಮ್ಮದೇ ಆದ ಪ್ರಾದೇಶಿಕ ಅಸ್ಮಿತೆ ಇದೆ. ತಮಿಳು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಲಾಗುತ್ತದೆ, ಅದೇ ರೀತಿ ಹಿಂದಿ ಭಾಷೆಯ ಸಿನಿಮಾಗಳನ್ನು ತಮಿಳಿಗೆ ಡಬ್ ಮಾಡಲಾಗುತ್ತದೆಯೇ’ ಎಂದು ಅವರು ಪ್ರಶ್ನೆ ಮಾಡಿದ್ದರು. ಆದರೆ, ಈಗ ಹಿಂದಿಯನ್ನು ರಾಜಭಾಷೆ ಎಂದು ಹೊಗಳುವ ಮೂಲಕ ತಮ್ಮ ಹಳೆಯ ನಿಲುವಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ವ್ಯಕ್ತವಾಗುತ್ತಿರುವ ತೀವ್ರ ವಿರೋಧ

ಪವನ್ ಕಲ್ಯಾಣ್ ಅವರ ಈ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಪ್ರಾದೇಶಿಕ ಭಾಷಾ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತಕ್ಕೆ ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರಭಾಷೆ ಇಲ್ಲ. ಸಂವಿಧಾನದ ಪ್ರಕಾರ ಎಲ್ಲವೂ ಅಧಿಕೃತ ಭಾಷೆಗಳೇ ಆಗಿರುವಾಗ ಪವನ್ ಕಲ್ಯಾಣ್ ಹಿಂದಿಯ ಪರ ನಿಲುವು ತೋರಿಸುತ್ತಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.


TV9 Kannada 1 hour ago
Home Flash News