ಧರ್ಮಸ್ಥಳ ಕೇಸ್ ಮರು ತನಿಖೆಗೆ ಹೈಕೋರ್ಟ್ ಆದೇಶ; ರಾಜ್ಯ ಸರ್ಕಾರದಿಂದ ಐಜಿಪಿ ಲಭೂರಾಮ್ ನೇತೃತವದಲ್ಲಿ SIT ರಚನೆ!
ಬೆಂಗಳೂರು (ಫೆ.20): ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಶ್ರೀಧರ್ ಎಂಬುವವರ ಅನುಮಾನಾಸ್ಪದ ಸಾವು ಹಾಗೂ ನೂರಾರು ಮಹಿಳಾ ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಈ ಪ್ರಕರಣದ ಮರುತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 91/2022 ರ ತನಿಖೆಯು 'ಅತ್ಯಂತ ಕಳಪೆ' (Absolutely Shoddy) ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಪ್ರಕರಣದ ಸಾಕ್ಷ್ಯ ನಾಶಪಡಿಸಿರುವ ಸಾಧ್ಯತೆ ಮತ್ತು ತನಿಖಾಧಿಕಾರಿಗಳು ಹಾದಿ ತಪ್ಪಿಸಿರುವ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯವು, ಸತ್ಯಾಸತ್ಯತೆ ಹೊರಬರಲು ಮರುತನಿಖೆಯ ಅಗತ್ಯವಿದೆ ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯು ಫೆಬ್ರವರಿ 20, 2026 ರಂದು ಅಧಿಕೃತವಾಗಿ SIT ರಚನೆಗೆ ಆದೇಶಿಸಿದೆ. ಶ್ರೀ ಲಭೂ ರಾಮ್, ಐಪಿಎಸ್ (ಐಜಿಪಿ, ಕೇಂದ್ರ ವಲಯ, ಬೆಂಗಳೂರು): ಇವರು ಈ ತನಿಖಾ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶ್ರೀ ಹರಿರಾಮ್ ಶಂಕರ್, ಐಪಿಎಸ್ (ಎಸ್.ಪಿ, ಉಡುಪಿ ಜಿಲ್ಲೆ): ಇವರು ತಂಡದ ಪ್ರಮುಖ ಸದಸ್ಯರಾಗಿ ತಂಡಕ್ಕೆ ಶಕ್ತಿ ನೀಡಲಿದ್ದಾರೆ.
ಶ್ರೀ ಎಂ.ಆರ್.
ಹರೀಶ್ (ಡಿವೈಎಸ್ಪಿ, ಬೆಂಗಳೂರು ಗ್ರಾಮಾಂತರ): ಇವರು ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 2022ರಲ್ಲಿ ಧರ್ಮಸ್ಥಳದ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಫಾರ್ಮ್ ಹೌಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ್ ಎಂಬುವವರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಕೊಲೆ ಎಂದು ದಾಖಲಿಸಲಾಗಿದ್ದರೂ, ನಂತರದ ತನಿಖೆಯಲ್ಲಿ ಪೊಲೀಸರು ಇದನ್ನು ವಿಷ ಸೇವನೆ ಅಥವಾ ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಮೃತದೇಹದ ಮೇಲೆ ಬಲವಾದ ಏಟುಗಳಿದ್ದರೂ ಪೋಸ್ಟ್ ಮಾರ್ಟಮ್ ವರದಿಯಲ್ಲಿ ವಿಷದ ಅಂಶವಿದೆ ಎಂದು ತೋರಿಸಲಾಗಿತ್ತು. ಈ ಕುರಿತು ಮೃತರ ಸಂಬಂಧಿ ಹರೀಶ್ ಮುಗೇರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ತನಿಖಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದರು.
ಹೈಕೋರ್ಟ್ ಆದೇಶದಂತೆ, ರಚನೆಯಾಗಿರುವ ಎಸ್ಐಟಿ ತಂಡವು ಮುಂದಿನ ನಾಲ್ಕು ತಿಂಗಳ ಒಳಗಾಗಿ ಸಮಗ್ರ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಬೇಕಿದೆ. ಹಳೆಯ ತನಿಖಾ ವರದಿಯಲ್ಲಿರುವ ನ್ಯೂನತೆಗಳು, ಸಿಸಿಟಿವಿ ದೃಶ್ಯಾವಳಿಗಳ ನಾಪತ್ತೆ ಮತ್ತು ಸಿಡಿಆರ್ (CDR) ವರದಿಗಳ ವಿಶ್ಲೇಷಣೆಯನ್ನು ಈ ತಂಡ ಮಾಡಲಿದೆ. ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪಗಳ ಸತ್ಯಾಸತ್ಯತೆಯೂ ಈ ತನಿಖೆಯ ಮೂಲಕ ಹೊರಬರಬೇಕಿದೆ. ಸದ್ಯಕ್ಕೆ ಹಳೆಯ ತನಿಖೆಯ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದ್ದು, ಇಡೀ ಪ್ರಕರಣವು ಎಸ್ಐಟಿ ಸುಪರ್ದಿಗೆ ಹೋಗಿದೆ. ಇದು ರಾಜ್ಯಾದ್ಯಂತ ಭಾರೀ ಕುತೂಹಲ ಮೂಡಿಸಿದ್ದು, ನ್ಯಾಯ ಸಿಗುವ ಭರವಸೆಯಲ್ಲಿ ಮೃತರ ಕುಟುಂಬಸ್ಥರಿದ್ದಾರೆ.