ಪ್ರಾದೇಶಿಕ ಅಸಮತೋಲನ ನಿವಾರಣೆ: ಗೋವಿಂದರಾವ್ ಸಮಿತಿ ಶಿಫಾರಸಿಗೆ ಸಂಪುಟ ಅಸ್ತು
ಬೆಂಗಳೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪರಿಹಾರ ಕಂಡುಕೊಳ್ಳಲು ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಸಮಿತಿಯ ಶಿಫಾರಸುಗಳನ್ನು ಸದ್ಯವೇ ಮಂಡಿಸಲಿರುವ ಬಜೆಟ್ನಲ್ಲಿ ಪರಿಗಣಿಸಲೂ ಸರ್ಕಾರ ನಿರ್ಧರಿಸಿದೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ ₹43,914 ಕೋಟಿ ವಿನಿಯೋಗಿಸಬೇಕು. ಸರ್ಕಾರದ 11 ಇಲಾಖೆಗಳಿಗೆ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡಿ, ಮೂಲ ಸೌಕರ್ಯ ಅಭಿವೃದ್ಧಿ, ಆರ್ಥಿಕ ಚಟುವಟಿಕೆಗಳು ಹಾಗೂ ಸುಸ್ಥಿರ ಬೆಳವಣಿಗೆಗೆ ವಿನಿಯೋಗಿಸಬೇಕು.
ಹಿಂದುಳಿದಿರುವಿಕೆಯ ಸೂಚ್ಯಂಕವನ್ನು ಆಧರಿಸಿ ಆಯಾ ಜಿಲ್ಲೆಗಳಿಗೆ ಅನುದಾನ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
ಮುಖ್ಯಮಂತ್ರಿಗಳ ವಿವೇಚನಾ ಅನುದಾನವನ್ನು ಹೆಚ್ಚಿಸುವುದು, ಗುಣಮಟ್ಟದ ಶಿಕ್ಷಣ, ಕೌಶಲ ತರಬೇತಿ, ಆರೋಗ್ಯ ಸೇವೆಗಳ ಮೂಲಕ ಮಾನವ ಸಂಪನ್ಮೂಲವನ್ನು ಉತ್ತಮಪಡಿಸುವುದು, ಮುಂದಿನ ಐದು ವರ್ಷಗಳಲ್ಲಿ ₹30,000 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ವೃದ್ಧಿಸುವುದು, ಯೋಜನೆಗಳ ಜಾರಿಗೆ ಪೂರ್ವತಯಾರಿ ನಡೆಸುವುದು ಸೇರಿದಂತೆ ಹಲವು ಅಂಶಗಳನ್ನು ವರದಿ ಒಳಗೊಂಡಿದೆ. ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಕ್ಯಾಂಪಸ್ನಲ್ಲಿ ಜಾತಿ ಆಧಾರಿತ ಭೇದ ತಡೆಯಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ‘ರೋಹಿತ್ ವೇಮುಲ ಮಸೂದೆ’ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧ ತಡೆಗೆ ಸಿದ್ಧಪಡಿಸಿದ ‘ಇವ ನಮ್ಮವ–ಇವ ನಮ್ಮವ’ ಮಸೂದೆಗಳ ಕುರಿತು ಗೃಹ ಇಲಾಖೆ ಮೂಲಕ ಕೆಲ ಮಾಹಿತಿ ಪಡೆದು ಮುಂದಿನ ಸಂಪುಟದಲ್ಲಿ ಅಂತಿಮಗೊಳಿಸಲು ಸಭೆ ನಿರ್ಧರಿಸಿದೆ.
ಸರ್ಕಾರ ಸಿದ್ಧಪಡಿಸಿರುವ ‘ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯದಿಂದ ರಕ್ಷಣೆ) (ಶಿಕ್ಷಣ ಹಕ್ಕು ಮತ್ತು ಘನತೆ) ಮಸೂದೆ– 2025’ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರ, ಉನ್ನತ ಕಲಿಕಾ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದ ವ್ಯಕ್ತಿಗಳೆಂದು ತಾರತಮ್ಯಕ್ಕೆ ಯಾವುದೇ ಅವಕಾಶ ಇರುವುದಿಲ್ಲ. ಈ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹ 10 ಸಾವಿರ ದಂಡ ವಿಧಿಸಲು ಅವಕಾಶವಿದೆ.
ಜಾತಿಮೀರಿ ಪ್ರೀತಿಸುವವರು, ಮದುವೆಯಾದವರನ್ನು ‘ಮರ್ಯಾದೆ’ಯ ಹೆಸರಿನಲ್ಲಿ ಹಲ್ಲೆ ಮಾಡುವ, ಹತ್ಯೆ ಮಾಡುವ ಇಲ್ಲವೆ ಅವರಿಗೆ ಬಹಿಷ್ಕಾರ ಹಾಕುವವರಿಗೆ ಜೀವಾವಧಿ ಜೈಲು ವಾಸ ಹಾಗೂ ₹5 ಲಕ್ಷದವರೆಗೆ ದಂಡ ವಿಧಿಸಲು ‘ಇವ ನಮ್ಮವ ಇವ ನಮ್ಮವ’ ಮಸೂದೆ ಸಿದ್ಧಪಡಿಸಲಾಗಿದೆ.