ಎಸ್ಪಿ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ನಿಗಾ: ಆರ್.ಅಶೋಕ
ಬೆಂಗಳೂರು: ‘ಡಿ.ಕೆ.ಶಿವಕುಮಾರ್ ಮತ್ತು ಅವರ ಬಣದ ಶಾಸಕರ ಚಟುವಟಿಕೆಗಳ ಕಣ್ಗಾವಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಪ್ತಚರ ವಿಭಾಗಕ್ಕೆ ಸೂಚನೆ ನೀಡಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೃತ್ಯಕ್ಕಾಗಿ ಎಸ್ಪಿ ನೇತೃತ್ವದಲ್ಲಿ ಅನಧಿಕೃತವಾಗಿ ತಂಡವೊಂದನ್ನು ರಚಿಸಿದ್ದಾರೆ ಎಂದೂ ದೂರಿದರು.
‘ಸಾಮಾನ್ಯವಾಗಿ ಗುಪ್ತಚರ ವಿಭಾಗವನ್ನು ಮುಖ್ಯಮಂತ್ರಿಯವರೇ ಇಟ್ಟುಕೊಳ್ಳುತ್ತಾರೆ. ಅದನ್ನು ರಾಜ್ಯದ ಹಿತಕ್ಕಾಗಿ ಬಳಸಿಕೊಳ್ಳಬೇಕು. ಆದರೆ ಇಲ್ಲಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ವಿರೋಧಿ ಬಣದ ಶಾಸಕರ ಚಟುವಟಿಕೆಗಳ ಮಾಹಿತಿ ಕಲೆ ಹಾಕಲು ಬಳಸುತ್ತಿದ್ದಾರೆ’ ಎಂದು ಹೇಳಿದರು.
‘ಶಿವಕುಮಾರ್ ಬಣದ ಶಾಸಕರು ಎಲ್ಲಿ ಊಟಕ್ಕೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದರ ಮೇಲೆ ಕಣ್ಣಿಡುವುದಕ್ಕೆ ಗುಪ್ತಚರ ವಿಭಾಗ ಸೀಮಿತವಾಗಿದೆ. ಈ ವಿಭಾಗ ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ಕಣ್ಣಿಟ್ಟಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕೋಮು ಸಂಘರ್ಷ ಹೆಚ್ಚಾಗುತ್ತಿದೆ. ಅದರ ಮಾಹಿತಿ ಸಂಗ್ರಹಿಸುತ್ತಿಲ್ಲ. ಸರ್ಕಾರಕ್ಕೆ ಇವ್ಯಾವುದೂ ಆದ್ಯತೆ ಆಗಿಲ್ಲ. ರಾಜಕೀಯ ಪ್ರತಿಸ್ಪರ್ಧಿಗಳನ್ನು ಮೂಲೆಗುಂಪು ಮಾಡುವುದು ಸಿದ್ದರಾಮಯ್ಯ ಅವರ ಆದ್ಯತೆ’ ಎಂದು ಅಶೋಕ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.