World Wildlife Day: ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ: ಮೋದಿ
ನವದೆಹಲಿ: ವಿಶ್ವದ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವ ಮತ್ತು ಭೂಮಿಯ ಸೌಂದರ್ಯವನ್ನು ಹೆಚ್ಚಿಸುವ ಅಮೂಲ್ಯ ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕರೆ ನೀಡಿದ್ದಾರೆ.
'ವಿಶ್ವ ವನ್ಯಜೀವಿ ದಿನ'ದ ಅಂಗವಾಗಿ ಸಾಮಾಜಿಕ ಜಾಲತಾಣ 'X' (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಕೃತಿಯ ಅಪ್ರತಿಮ ಜೀವವೈವಿಧ್ಯವನ್ನು ಸಂಭ್ರಮಿಸುವ ದಿನ ಇದಾಗಿದೆ ಎಂದು ಬಣ್ಣಿಸಿದ್ದಾರೆ.
"ವನ್ಯಜೀವಿಗಳ ಸಂರಕ್ಷಣೆ, ಸುಸ್ಥಿರ ಅಭ್ಯಾಸಗಳು ಮತ್ತು ಅವುಗಳ ಆವಾಸಸ್ಥಾನಗಳ ರಕ್ಷಣೆಗೆ ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ವನ್ಯಜೀವಿಗಳು ಮುಕ್ತವಾಗಿ ಬೆಳೆಯಲು ಪೂರಕವಾದ ಪರಿಸರ ನಿರ್ಮಿಸುವುದು ನಮ್ಮ ಗುರಿ," ಎಂದು ಪ್ರಧಾನಿ ತಿಳಿಸಿದ್ದಾರೆ.
ವನ್ಯಜೀವಿ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರ ಸೇವೆಯನ್ನು ಇದೇ ಸಂದರ್ಭದಲ್ಲಿ ಅವರು ಶ್ಲಾಘಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಜೀವಕಲ್ಯಾಣ
ನಮ್ಮ ಶಾಸ್ತ್ರಗಳಲ್ಲಿ ಸಕಲ ಜೀವರಾಶಿಗಳ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗಿದೆ. ಪ್ರಾಣಿ ಸಂಕುಲದ ಬಗ್ಗೆ ಸಂವೇದನಾಶೀಲರಾಗಿರುವುದು ಮತ್ತು ಅವುಗಳ ಸಂರಕ್ಷಣೆ ಮಾಡುವುದು ನಮಗೆ ಪೂರ್ವಜರಿಂದ ಬಂದ ಪ್ರೇರಣೆಯಾಗಿದೆ," ಎಂದು ಮಾರ್ಮಿಕವಾಗಿ ನುಡಿದರು. ವನ್ಯಜೀವಿಗಳು ಮತ್ತು ಸಸ್ಯಸಂಕುಲದ ವಿಶಿಷ್ಟ ಪಾತ್ರವನ್ನು ಗುರುತಿಸಲು ಹಾಗೂ ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 3 ರಂದು 'ವಿಶ್ವ ವನ್ಯಜೀವಿ ದಿನ'ವನ್ನು ಆಚರಿಸಲಾಗುತ್ತದೆ.