Iran-Indira Gandhi: ಅಂದು ಇಂದಿರೆಗೆ ದ್ರೋಹ ಬಗೆದಿದ್ದ ಇರಾನ್! ಕರಾಳ ಇತಿಹಾಸ ಮರೆತೇ ಬಿಟ್ಟಿತಾ ಕಾಂಗ್ರೆಸ್?
ಮಲ್ಲಿಕಾರ್ಜುನ ಖರ್ಗೆ ಮತ್ತು ಅಖಿಲೇಶ್ ಯಾದವ್ ಇರಾನ್ ವಿಷಯದಲ್ಲಿ ಕೇಂದ್ರ ವಿದೇಶಾಂಗ ನೀತಿಯನ್ನು ಟೀಕಿಸಿದ್ದಾರೆ, ಆದರೆ 1971ರ ಯುದ್ಧದಲ್ಲಿ ಇರಾನ್ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದ ಇತಿಹಾಸವನ್ನು ಆಡಳಿತ ಪಕ್ಷ ಉಲ್ಲೇಖಿಸಿದೆ. ಕಾಂಗ್ರೆಸ್ನ ಆರಾಧ್ಯ ದೈವ ಇಂದಿರಾ ಗಾಂಧಿಯವರೇ ಪ್ರಧಾನಿಯಾಗಿದ್ದ ಕಾಲದಲ್ಲಿ ಇರಾನ್ ಭಾರತಕ್ಕೆ ಎಂತಹ 'ದೊಡ್ಡ ಕೈ' ಕೊಟ್ಟಿತ್ತು ಎಂಬ ಕಹಿ ಸತ್ಯ ಹೊರಬರುತ್ತದೆ ಎಂದು ಕಮಲಪಡೆ, ಕೈ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದೆ.
ನವದೆಹಲಿ: ಇತ್ತೀಚಿನ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ (Central Government) ವಿದೇಶಾಂಗ ನೀತಿಯನ್ನು ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಅಖಿಲೇಶ್ ಯಾದವ್ (Akhilesh Yadav) ಕಟುವಾಗಿ ಟೀಕಿಸುತ್ತಿದ್ದಾರೆ. ಇರಾನ್ ವಿಷಯದಲ್ಲಿ ಭಾರತ ಸರ್ಕಾರ ತೋರುತ್ತಿರುವ ನಿಲುವನ್ನು ಪ್ರಶ್ನಿಸುತ್ತಿರುವ ವಿರೋಧ ಪಕ್ಷದ ನಾಯಕರು, ಇರಾನ್ (Iran) ಅನ್ನು ಭಾರತದ (India) ಕಾಲದ ಪರೀಕ್ಷೆಗೆ ಒಡ್ಡಿದ ಮಿತ್ರ' ಎಂದು ಬಣ್ಣಿಸುತ್ತಿದ್ದಾರೆ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಕಾಂಗ್ರೆಸ್ನ (Congress) ಆರಾಧ್ಯ ದೈವ ಇಂದಿರಾ ಗಾಂಧಿಯವರೇ (Indira Gandhi) ಪ್ರಧಾನಿಯಾಗಿದ್ದ ಕಾಲದಲ್ಲಿ ಇರಾನ್ ಭಾರತಕ್ಕೆ ಎಂತಹ 'ದೊಡ್ಡ ಕೈ' ಕೊಟ್ಟಿತ್ತು ಎಂಬ ಕಹಿ ಸತ್ಯ ಹೊರಬರುತ್ತದೆ ಎನ್ನಲಾಗಿದೆ.
ಇತ್ತೀಚೆಗೆ ಇರಾನ್ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ. ಭಾರತದ ವಿದೇಶಾಂಗ ನೀತಿಯು ನೆಹರೂ ಅವರ ಅಲಿಪ್ತ ನೀತಿಯಿಂದ ದೂರ ಸರಿಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ, ಚಾಬಹಾರ್ ಬಂದರಿನಂತಹ ಆಯಕಟ್ಟಿನ ಹೂಡಿಕೆಗಳಿರುವ ಇರಾನ್ ಜೊತೆಗಿನ ಸಂಬಂಧದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಇರಾನ್ ಅನ್ನು ಪರಮ ಮಿತ್ರನಂತೆ ಬಿಂಬಿಸುತ್ತಿರುವ ಇವರಿಗೆ 1971ರ ಯುದ್ಧದ ಸಮಯದಲ್ಲಿ ನಡೆದ ದ್ರೋಹದ ನೆನಪಿಲ್ಲವೇ ಎಂಬ ಪ್ರಶ್ನೆಯನ್ನು ಈಗ ಆಡಳಿತ ಪಕ್ಷ ಎತ್ತಿದೆ.