Amaravati: ಜನನ ಪ್ರಮಾಣ ಹೆಚ್ಚಿಸಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಾಸ್ಟರ್ ಪ್ಲ್ಯಾನ್
ಅಮರಾವತಿ: ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿನೂತನ ಯೋಜನೆಯೊಂದನ್ನು ಘೋಷಿಸಿದ್ದಾರೆ. ದಂಪತಿಗಳು ಎರಡನೇ ಮಗು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಲು ಉತ್ತೇಜನ ನೀಡುವ ಸಲುವಾಗಿ 25,000 ರೂಪಾಯಿಗಳ 'ಜನನ ಪ್ರೋತ್ಸಾಹಧನ' ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಗುರುವಾರ ಆಂಧ್ರಪ್ರದೇಶ ವಿಧಾನಸಭೆಯಲ್ಲಿ 'ಜನಸಂಖ್ಯಾ ನಿರ್ವಹಣೆ'ಯ ಕರಡು ನೀತಿಯನ್ನು ಮಂಡಿಸಿ ಮಾತನಾಡಿದ ಸಿಎಂ ನಾಯ್ಡು, "ರಾಜ್ಯದಲ್ಲಿ ಪ್ರಸ್ತುತ ಜನನ ಪ್ರಮಾಣವು 1.5 ಕ್ಕೆ ಇಳಿಕೆಯಾಗಿದೆ. ಇದು ಕನಿಷ್ಠ 2.1 ಇರಬೇಕು. ಜನಸಂಖ್ಯೆ ಕಡಿಮೆಯಾದರೆ ಭವಿಷ್ಯದಲ್ಲಿ ಕೆಲಸ ಮಾಡುವ ಯುವಶಕ್ತಿಯ ಕೊರತೆ ಎದುರಾಗುತ್ತದೆ.
ಈ ಹಿನ್ನೆಲೆಯಲ್ಲಿ, ಎರಡನೇ ಮಗುವಿನಿಂದ ಮುಂದಿನ ಮಕ್ಕಳಿಗೆ ಜನನ ಸಮಯದಲ್ಲಿಯೇ ನೇರವಾಗಿ 25,000 ರೂ. ನೀಡಲು ಉದ್ದೇಶಿಸಲಾಗಿದೆ" ಎಂದು ತಿಳಿಸಿದರು. ಜಪಾನ್, ಇಟಲಿ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಜನನ ಪ್ರಮಾಣ ಕುಸಿತದಿಂದಾಗಿ ಎದುರಿಸುತ್ತಿರುವ ಆರ್ಥಿಕ ಹಿನ್ನಡೆಯನ್ನು ನಾಯ್ಡು ಉದಾಹರಿಸಿದರು. "ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, 2047ರ ವೇಳೆಗೆ ಆಂಧ್ರಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 23ರಷ್ಟು ಮಂದಿ ವೃದ್ಧರೇ ಇರುತ್ತಾರೆ. ಇದು ಆರ್ಥಿಕತೆಯ ಮೇಲೆ ಭಾರಿ ಹೊರೆಯಾಗಲಿದೆ. ಹೀಗಾಗಿ 'ಕುಟುಂಬ ಯೋಜನೆ'ಗಿಂತ ಈಗ 'ಜನಸಂಖ್ಯಾ ಕಾಳಜಿ' ನಮಗೆ ಮುಖ್ಯ" ಎಂದು ಅವರು ಅಭಿಪ್ರಾಯಪಟ್ಟರು.
ಮಾರ್ಚ್ ಅಂತ್ಯದೊಳಗೆ ಜನಸಂಖ್ಯಾ ನಿರ್ವಹಣೆ ಕುರಿತು ನೀತಿಯನ್ನು ರೂಪಿಸಿ ಏಪ್ರಿಲ್ನಿಂದ ಅದನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ ಎಂದು ಹೇಳಿದರು.