ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ನೀರಿಲ್ಲದ ಟಾಯ್ಲೆಟ್ ನೀಡಿದ ಮಮತಾ ಸರ್ಕಾರ; ಶಿಷ್ಟಾಚಾರ ಲೋಪಕ್ಕೆ ಕೇಂದ್ರ ಗರಂ!
ಕೋಲ್ಕತ್ತಾ/ನವದೆಹಲಿ (ಮಾ.9): ಪಶ್ಚಿಮ ಬಂಗಾಳ ಪ್ರವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆ ಹಾಗೂ ಶಿಷ್ಟಾಚಾರದಲ್ಲಿ ಸಂಭವಿಸಿರುವ ನಿಯಮ ಉಲ್ಲಂಘನೆಗಳ ಕುರಿತು ಕೇಂದ್ರ ಸರ್ಕಾರವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಭಾನುವಾರ ಸಂಜೆ 5 ಗಂಟೆಯೊಳಗೆ ಸಮಗ್ರ ವರದಿ ನೀಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿದ್ದರು ಎಂದು ವರದಿಯಾಗಿದೆ.
ಏನಿದು 'ಬ್ಲೂ ಬುಕ್' ನಿಯಮ ಉಲ್ಲಂಘನೆ?
ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಭದ್ರತೆ ಹಾಗೂ ಶಿಷ್ಟಾಚಾರಕ್ಕೆ ಸಂಬಂಧಿಸಿದ ನಿಯಮಗಳನ್ನು 'ಬ್ಲೂ ಬುಕ್' ಎಂದು ಕರೆಯಲಾಗುತ್ತದೆ. ಈ ನಿಯಮಗಳ ಪ್ರಕಾರ ಕೆಲವು ಗಂಭೀರ ಲೋಪಗಳು ಸಂಭವಿಸಿವೆ ಎಂದು ಕೇಂದ್ರ ಆರೋಪಿಸಿದೆ:
ಗೈರುಹಾಜರಿ: ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಅಥವಾ ಡಿಜಿಪಿ ಯಾರೂ ಬಾರದಿರುವುದು ಶಿಷ್ಟಾಚಾರದ ಉಲ್ಲಂಘನೆ ಎನ್ನಲಾಗಿದೆ. ಕೇವಲ ಸಿಲಿಗುರಿ ಮೇಯರ್ ಗೌತಮ್ ದೇಬ್ ಮಾತ್ರ ಹಾಜರಿದ್ದರು.