ವಿಜಯ್ಗೆ ಡಿಸಿಎಂ ಸ್ಥಾನ, ಟಿವಿಕೆಗೆ 80 ಸ್ಥಾನದ ಆಫರ್ ನೀಡಿದ ಬಿಜೆಪಿ!
ನಟ 'ದಳಪತಿ' ವಿಜಯ್ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಪ್ರಚಾರ ಸಮಾವೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿರುವುದು ಅವರ ಕ್ರೇಜ್ಗೆ ಹಿಡಿದ ಕನ್ನಡಿಯಾಗಿದೆ. ಇದೀಗ, ಟಿವಿಕೆ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯು ವಿಜಯ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ. ಒಂದುವೇಳೆ, ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಗೆದ್ದರೆ, ವಿಜಯ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ತಿಳಿಸಿದೆ. ಅದಕ್ಕೂ ಮೊದಲು, ಸೀಟು ಹಂಚಿಕೆಯ ಭಾಗವಾಗಿ 80 ಕ್ಷೇತ್ರಗಳನ್ನು ಟಿವಿಕೆಗೆ ಬಿಟ್ಟುಕೊಡುವುದಾಗಿ 'ಕೇಸರಿ ಪಕ್ಷ' ಭರವಸೆ ನೀಡಿದೆ.
ಈ ವಿಚಾರವಾಗಿ ಎರಡೂ ಪಕ್ಷಗಳ ನಡುವಣ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಒಂದು ವೇಳೆ ಈ ವಿಚಾರ ನಿಜವೇ ಆಗಿದ್ದರೆ ಮತ್ತು ಅದು ಕಾರ್ಯರೂಪಕ್ಕೆ ಬಂದರೆ, ರಾಜ್ಯ ಚುನಾವಣೆಯ ಲೆಕ್ಕಾಚಾರವೇ ಬದಲಾಗಬಹುದು. ಸಿಎಂ ಕುರ್ಚಿಯ ಮೇಲೆ ವಿಜಯ್ ಅವರೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಅಪಾರ ಅಭಿಮಾನಿಗಳತ್ತ ಬಿಜೆಪಿ ಚಿತ್ತ
ರಾಜ್ಯದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿಜಯ್ ಮತ್ತು ಅವರ ಪಕ್ಷವನ್ನು ಎನ್ಡಿಎಗೆ ಸೇರಿಸಿಕೊಳ್ಳಲು ಬಿಜೆಪಿ ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ. ಅವರ ಅಭಿಮಾನಿಗಳ ಪೈಕಿ ಸ್ವಲ್ಪ ಮಂದಿ ತಮಗೆ (ಬಿಜೆಪಿಗೆ) ಮತ ಚಲಾಯಿಸಿದರೂ ಫಲಿತಾಂಶದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ ಎಂಬುದು ಬಿಜೆಪಿಯ ರಾಜಕೀಯ ಲೆಕ್ಕಾಚಾರವಾಗಿದೆ.
'ಕೇವಲ ಶೇ 2ರಷ್ಟು ಮತಗಳು ವ್ಯತ್ಯಾಸವಾದರೂ, ಹಲವು ಕ್ಷೇತ್ರಗಳ ಫಲಿತಾಂಶದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂಬುದಾಗಿ ಬಿಜೆಪಿ ನಾಯಕರು ನಂಬಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ವಿಜಯ್ ಅಭಿಮಾನಿಗಳಲ್ಲಿ ಕಳವಳ
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಡೆಯು ಪಕ್ಷಕ್ಕೆ ಭಾರಿ ಹಿನ್ನಡೆ ಉಂಟುಮಾಡಲಿದೆ ಎಂಬುದಾಗಿ ವಿಜಯ್ ಅಭಿಮಾನಿಗಳ ಪೈಕಿ ಒಂದು ವರ್ಗದವರು ಬಲವಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ರೂಪುಗೊಂಡಿರುವ ಪಕ್ಷವಾಗಿರುವುದರಿಂದ ವಿಶ್ವಾಸಾರ್ಹತೆಯ ಬಗ್ಗೆ ಜನರಲ್ಲಿ ಪ್ರಶ್ನೆಗಳು ಮೂಡಬಹುದು ಎಂಬುದು ಅವರ ಚಿಂತೆಗೆ ಕಾರಣ.
ವಿಜಯ್ ಅವರು ತಮ್ಮದೇ ಇಮೇಜ್ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ತಮಿಳುನಾಡಿನ ರಾಜಕಾರಣಕ್ಕೆ ಪರ್ಯಾಯವೆಂಬಂತೆ ತಮ್ಮ ಪಕ್ಷವನ್ನು ಬಿಂಬಿಸಿಕೊಂಡಿದ್ದಾರೆ. ಹೀಗಾಗಿ, ಬಿಜೆಪಿ ಜೊತೆ ಕೈಜೋಡಿಸುವುದರಿಂದ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.