ವಿಜಯ್ಗೆ ಸಿಎಂ ಸ್ಥಾನ, ಶೇ 50ರಷ್ಟು ಸೀಟು ಬಿಟ್ಟುಕೊಡುವ ಆಫರ್ ಬಂದಿದೆ: ಟಿವಿಕೆ
ಚೆನ್ನೈ: ನಟ, ರಾಜಕಾರಣಿ ವಿಜಯ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಶೇ 50ರಷ್ಟು ಸೀಟು ಬಿಟ್ಟುಕೊಡುವುದಾಗಿ ಮತ್ತೊಂದು ಪಕ್ಷ ಪ್ರಸ್ತಾಪಿಸಿದೆ ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಹೇಳಿದ್ದಾರೆ. ಚುನಾವಣಾ ಆಯೋಗವು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಮೊನ್ನೆಯಷ್ಟೇ ದಿನಾಂಕ ಪ್ರಕಟಿಸಿದೆ. ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮುನ್ನ ತಮ್ಮ ಪಕ್ಷಕ್ಕೆ ಆಫರ್ ಬಂದಿದೆ ಎಂದು ಅರ್ಜುನ ಹೇಳಿದ್ದಾರೆ.
'50:50ರ ಅನುಪಾತದಲ್ಲಿ ಸೀಟು ಹಂಚಿಕೆ. ಸರದಿಯಂತೆ ಎರಡೂವರೆ ವರ್ಷದ ಅವಧಿಗೆ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಕುರಿತು ಪ್ರಸ್ತಾಪಿಸಲಾಗಿದೆ. ಆದರೆ, ಈ ಪ್ರಸ್ತಾವವನ್ನು ವಿಜಯ್ ಒಪ್ಪಿಕೊಂಡಿಲ್ಲ' ಎಂದು ಅರ್ಜುನ ತಿಳಿಸಿದ್ದಾರೆ.
ಆದರೆ, ಆಫರ್ ಮಾಡಿದ ಪಕ್ಷದ ಯಾವುದು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಎಲ್ಲ ಕಡೆ ಕಣಕ್ಕಿಳಿಯಲು ಸಿದ್ಧತೆ
ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಯೋಜಿಸಿರುವ ಟಿವಿಕೆ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯದ ಸಿದ್ಧಾಂತದ ಆಧಾರದ ಮೇಲೆ ಸರ್ಕಾರ ರಚಿಸುವ ಗುರಿ ಹೊಂದಿದೆ.
ಕೊಳತ್ತೂರಿನಲ್ಲಿ ನಡೆದ ಟಿವಿಕೆ ಸಭೆಯಲ್ಲಿ ಮಾತನಾಡಿರುವ ಅರ್ಜುನ, 'ವಿಜಯ್ ಅವರು ಮುಖ್ಯಮಂತ್ರಿ ಸ್ಥಾನದ ಸಲುವಾಗಿ ದೆಹಲಿಯವರಿಗೆ (ಕೇಂದ್ರ ಸರ್ಕಾರಕ್ಕೆ) ಶರಣಾಗುವ ವ್ಯಕ್ತಿಯಲ್ಲ. ಅವರು ನಮಗೆ 50ರಿಂದ 90 ಸ್ಥಾನಗಳವರೆಗೆ ಆಫರ್ ನೀಡಿದ್ದರು. ಆದರೆ, ನಾವು ತಮಿಳುನಾಡಿನ ಜನರ ವಿಶ್ವಾಸವನ್ನು ಬಯಸುತ್ತೇವೆಯೇ ಹೊರತು ಮುಖ್ಯಮಂತ್ರಿ ಸ್ಥಾನವನ್ನಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ' ಎಂದಿದ್ದಾರೆ.
ಚರ್ಚಕೆ ನಿರಾಕರಿಸಿದ ಪಳನಿಸ್ವಾಮಿ
ಏತನ್ಮಧ್ಯೆ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಟಿವಿಕೆ ಜೊತೆಗಿನ ಮೈತ್ರಿ ವಿಚಾರವನ್ನು ಚರ್ಚಿಸಲು ನಿರಾಕರಿಸಿದ್ದಾರೆ. ತಮಿಳುನಾಡಿ ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರೂ ಪಳನಿಸ್ವಾಮಿ ನಿಲುವನ್ನು ಬೆಂಬಲಿಸಿದ್ದಾರೆ.
ಹೀಗಾಗಿ, ಟಿವಿಕೆಯೊಂದಿಗೆ ಬಿಜೆಪಿ ಅಥವಾ ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಆದಾಗ್ಯೂ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುವ ಸಲುವಾಗಿ, ಬಿಜೆಪಿಯು ಟಿವಿಕೆ ಜೊತೆ ಕೈಜೋಡಿಸಬಹುದು ಎಂಬ ವದಂತಿ ಹರಿದಾಡುತ್ತಲೇ ಇದೆ.