ಬಾಗಲಕೋಟೆ ಉಪಚುನಾವಣೆ: ನಿರೀಕ್ಷೆಯಂತೆ ಚರಂತಿಮಠರಿಗೆ ಬಿಜೆಪಿ ಟಿಕೆಟ್
ಬಾಗಲಕೋಟೆ : ತೀವ್ರ ಕುತೂಹಲ ಮೂಡಿಸಿದ್ದ, ಹಲವರು ಆಕಾಂಕ್ಷಿಗಳ ಮಧ್ಯೆ, ಉಪ ಚುನಾವಣೆಗೆ ಬಿಜೆಪಿಯ ಟಿಕೆಟ್ ಅಂತಿಮಗೊಳಿಸಿದ್ದು, ನಿರೀಕ್ಷೆಯಂತೆ ಮಾಜಿ ಶಾಸಕ ವೀರಣ್ಣ ಚರಂತಿಮಠರಿಗೆ ಟಿಕೆಟ್ ಲಭಿಸಿದೆ.
ಈ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ. ಮೇಟಿ ಅವರ ನಿಧನದಿಂದ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮಾ.23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಚರಂತಿಮಠರಿಗಿದು 6ನೇ ಚುನಾವಣೆ :
ಮಾಜಿ ಶಾಸಕ ಚರಂತಿಮಠರಿಗೆ ಇದು 6ನೇ ಚುನಾವಣೆ. ಕಳೆದ 2004ರಲ್ಲಿ ವಿಧಾನಸಭೆ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಅವರು, ಮೊದಲ ಅವಕಾಶದಲ್ಲೇ ಜಯಬೇರಿ ಬಾರಿಸಿದ್ದರು. ಬಳಿಕ 2008ರಲ್ಲಿ ನಡೆ ಚುನಾವಣೆಯಲ್ಲಿ ಪುನರಾಯ್ಕೆಯಾಗಿದ್ದರು.
ಬಿಜೆಪಿಯ ಭದ್ರ ಕೋಟೆಯಾದ ಬಾಗಲಕೋಟೆ ವಿಧಾನಸಭೆ ಚುನಾವಣೆಯಲ್ಲಿ, ಸತತ ಎರಡು ಬಾರಿ ಗೆದ್ದಿದ್ದ ಅವರು, 2013ರಲ್ಲಿ ಪಕ್ಷದ ಹಲವಾರು ಪ್ರಮುಖ ಬಿಜೆಪಿಗರು, ಕಾಂಗ್ರೆಸ್ ನತ್ತ ಹೋಗಿದ್ದರು. ಆಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚರಂತಿಮಠರು, ಕಾಂಗ್ರೆಸ್ ನ ಎಚ್.ವೈ.
ಮೇಟಿ ವಿರುದ್ಧ, 2980 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ನಂತರ 2018ರಲ್ಲಿ ಮತ್ತೆ ಕಾಂಗ್ರೆಸ್ನ ಎಚ್.ವೈ. ಮೇಟಿ ಅವರನ್ನು ಸೋಲಿಸಿ, 3ನೇ ಬಾರಿ ಬಾಗಲಕೋಟೆ ಕ್ಷೇತ್ರದ ಶಾಸಕರಾಗಿದ್ದರು. 2023ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ, ಕಾಂಗ್ರೆಸ್ ನ ಮೇಟಿ ಅವರ ವಿರುದ್ಧ ಪರಾಭವಗೊಂಡರು.
ಕಳೆದ ಎರಡೂವರೆ ವರ್ಷದಿಂದ ಶಾಸಕರಾಗಿದ್ದ ಮೇಟಿ ಅವರು, ಕಳೆದ 2025ರ ನವೆಂಬರ್ 4ರಂದು ಅನಾರೋಗ್ಯದಿಂದ ನಿಧನರಾಗಿದ್ದರು.
ಅವರ ನಿಧನದಿಂದ ಸದ್ಯ ಉಪ ಚುನಾವಣೆ ನಡೆಯುತ್ತಿದೆ. ಕಳೆದ 2004ರಿಂದ ಈ ವರೆಗೆ ಒಟ್ಟು 5 ವಿಧಾನಸಭೆ ಚುನಾವಣೆ ಎದುರಿಸಿರುವ ಚರಂತಿಮಠರು, ಮೂರು ಬಾರಿ ಗೆದ್ದು, ಎರಡು ಬಾರಿ ಪರಾಭವಗೊಂಡಿದ್ದಾರೆ. ಇದೀಗ 6ನೇ ಬಾರಿ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದಾರೆ.
ಹಲವರು ಆಕಾಂಕ್ಷಿಗಳಿದ್ದರು :
ಪ್ರಸ್ತುತ ಉಪ ಚುನಾವಣೆಯಲ್ಲಿ ಮಾಜಿ ಶಾಸಕ ಚರಂತಿಮಠ, ಎಂಎಲ್ಸಿ ಪಿಎಚ್.ಪೂಜಾರ, ಪ್ರಮುಖರಾದ ಡಾ.ಶೇಖರ ಮಾನೆ, ವೀರಣ್ಣ ಹಳೇಗೌಡರ, ಬಸಲಿಂಗಪ್ಪ ನಾವಲಗಿ, ತಮ್ಮಣ್ಣ ಗಿರಿಜಾ ಹೀಗೆ ಹಲವರು ಆಕಾಂಕ್ಷಿಗಳಿದ್ದರು.