ದಾವಣಗೆರೆ ದಕ್ಷಿಣ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು!
ದಾವಣಗೆರೆ: ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಶಾಮನೂರು ಕುಟುಂಬ ಉಪ ಚುನಾವಣಾ ಕಣಕ್ಕೆ ಅಧಿಕೃತವಾಗಿ ಧುಮುಕಿದೆ. ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಶಾಮನೂರು ಶುಕ್ರವಾರ ಎರಡು ಪ್ರತಿ ನಾಮಪತ್ರ ಸಲ್ಲಿಸಿದರು. ತಾಯಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಜೊತೆಗೆ ಬರಿಗಾಲಲ್ಲಿ ಮಹಾನಗರ ಪಾಲಿಕೆಗೆ ಧಾವಿಸಿದ ಸಮರ್ಥ ಅವರು ಚುನಾವಣಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ‘ಬಿ’ ಫಾರಂ ಇಲ್ಲದೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎರಡು ಪ್ರತಿ ನಾಮಪತ್ರಗಳನ್ನು ಚುನಾವಣಾಧಿಕಾರಿ ಸಂತೋಷಕುಮಾರ್ ಅವರಿಗೆ ನೀಡಿದರು.
‘ಕಾಂಗ್ರೆಸ್ ‘ಬಿ’ ಫಾರಂ ಸಿಗುವ ಸಂಪೂರ್ಣ ವಿಶ್ವಾಸವಿದೆ. ಹಬ್ಬದ ದಿನ ಶುಭಗಳಿಗೆ ಎಂಬ ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದೇನೆ. ಸೋಮವಾರ ಮತ್ತೊಮ್ಮೆ ರಾಜ್ಯ ನಾಯಕರೊಂದಿಗೆ ಉಮೇದುವಾರಿಕೆ ನೀಡಲಿದ್ದೇನೆ’ ಎಂದು ಸಮರ್ಥ ಶಾಮನೂರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿರುವುದೇ ಶಾಮನೂರು ಶಿವಶಂಕರಪ್ಪ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಅವರು ಶಕ್ತಿಪೀಠ ಆಗಿದ್ದರು. ಅವರ ಶ್ರೀರಕ್ಷೆ ಸದಾ ನನ್ನ ಮೇಲಿದೆ. ಮುಸ್ಲಿಂ ಸಮುದಾಯದ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆ ಎದುರಿಸಲಿದ್ದೇವೆ’ ಎಂದು ಹೇಳಿದರು.