ಕೊಲ್ಲಿ ಸಂಘರ್ಷ| ಹೊಸದೇನೂ ಇಲ್ಲ, ಅದೇ ರಾಗ ಹಾಡಿದ ಪ್ರಧಾನಿ: ಪ್ರಿಯಾಂಕಾ ಗಾಂಧಿ
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಹೊಸದಾಗಿ ಏನನ್ನೂ ಹೇಳಿಲ್ಲ. ಅದೇ ಹಳೆಯ ವಿಷಯಗಳನ್ನೇ ಮತ್ತೆ ಮತ್ತೆ ಹೇಳಿದ್ದಾರೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಸಂಸತ್ ಆವರಣದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ, ‘ಕೊಲ್ಲಿ ರಾಷ್ಟ್ರದಲ್ಲಿನ ಯುದ್ಧದ ಪರಿಸ್ಥಿತಿಯ ಬಗ್ಗೆಯಷ್ಟೆ ಪ್ರಧಾನಿ ಮಾತನಾಡಿದ್ದಾರೆ. ಹೊಸದೇನೂ ಇಲ್ಲ’ ಎಂದಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಎಲ್ಲರ ಅಭಿಪ್ರಾಯವು ಕೂಡ ಮುಖ್ಯವಾಗಿದೆ. ನಾವು ಕೂಡ ನಮ್ಮ ನಿಲುವನ್ನು ಹೇಳಬೇಕಾಗಿದೆ.
ಹಾಗಾಗಿ ಈ ವಿಷಯದ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘರ್ಷದ ಸಮಯದಲ್ಲಿ ಆ ಸ್ಥಳದಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಯು ಸರ್ಕಾರದ ಆದ್ಯತೆಯಾಗಿದೆ. ಕೇಂದ್ರ ಸರ್ಕಾರವು ಈ ಕುರಿತು ಕ್ರಮ ಕೈಗೊಳ್ಳುತ್ತಿದೆ. ಕೊಲ್ಲಿ ಸಂಘರ್ಷದಿಂದ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಚಲನೆಯು ಸವಾಲಾಗಿದೆ. ಜಾಗತಿಕ ಆರ್ಥಿಕತೆ ಮತ್ತೆ ಜನಜೀವನದ ಕುರಿತು ಚಿಂತೆಗೆ ಕಾರಣವಾಗುವಂತೆ ಮಾಡಿದೆ. ಆದರೂ ನಮ್ಮ ಸರ್ಕಾರವು ದೇಶದಲ್ಲಿ ಇಂಧನ ಹಾಗೂ ಎಲ್ಪಿಜಿ ಕೊರತೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಂಡಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದರು.