ಬಾಗಲಕೋಟೆ | ಮೀಸಲಾತಿ ಕಡಿಮೆಯಾದರೆ ಏಕೆ ಮಾತನಾಡಲಿಲ್ಲ: ರಾಮುಲು ಪ್ರಶ್ನೆ
ಬಾಗಲಕೋಟೆ: ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಸಂಸದ ಜಗದೀಶ ಶೆಟ್ಟರ್, ಮಾಜಿ ಸಚಿವ ಬಿ. ಶ್ರೀರಾಮುಲು ಮತ್ತು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರ ಸಚಿವ ಆರ್.ಬಿ.ತಿಮ್ಮಾಪುರ, ಮುಖಂಡ ರಾಹುಲ್ ಜಾರಕಿಹೊಳಿ ಮತಯಾಚಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ. ಶ್ರೀರಾಮುಲು, ‘ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ಗೆ ಮತ ಕೇಳುತ್ತಿದ್ದಾರೆ. ಬಿಜೆಪಿ ಹೆಚ್ಚು ಮಾಡಿದ್ದ ಮೀಸಲಾತಿ ಪ್ರಮಾಣವನ್ನು ಶೇ 7 ರಿಂದ ಶೇ 3ಕ್ಕೆ ಇಳಿಸಿದಾಗ ಅವರು ಏಕೆ ಮಾತನಾಡಲಿಲ್ಲ’ ಎಂದರು. ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅನ್ಯಾಯವಾದಾಗ ಮಾತನಾಡಲಿಲ್ಲ. ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬಾಗಲಕೋಟೆ ಕ್ಷೇತ್ರದ ಕೆಲ ಗ್ರಾಮಗಳಿಗೆ ಸಮುದಾಯ ಭವನ ಮಂಜೂರು ಮಾಡಿದ್ದಾರೆ. ಆದರೆ, ಅಲ್ಲಿ ಜಾಗವೇ ಇಲ್ಲ’ ಎಂದು ಟೀಕಿಸಿದರು. ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ‘ಸಾಲದ ಸುಳಿಗೆ ಸಿಲುಕಿರುವ ರಾಜ್ಯ ಸರ್ಕಾರದ ಬಳಿ, ಅಭಿವೃದ್ಧಿ ಕೆಲಸಗಳಿಗೆ ನೀಡಲು ಅನುದಾನವಿಲ್ಲ’ ಎಂದು ಹೇಳಿದರು.