ಎಸ್ಸೆಸ್ಸೆಲ್ಸಿ ಹಿಂದಿ ಭಾಷಾ ವಿವಾದ ಹೈಕೋರ್ಟ್ ಕಟಕಟೆಗೆ
ಬೆಂಗಳೂರು: ನಿರೀಕ್ಷೆಯಂತೆ ಹಿಂದಿ ಭಾಷಾ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. 10ನೇ ತರಗತಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡಿಂಗ್ ಕೊಡುವ ಶಿಕ್ಷಣ ಸಚಿವರ ಹೇಳಿಕೆಯನ್ನು ಆಕ್ಷೇಪಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.
ಈ ವಿಚಾರವಾಗಿ ಬೆಂಗಳೂರಿನ ಎಚ್.ಎನ್.ಚಂದನಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಅರ್ಜಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಆಯುಕ್ತರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ತ್ರಿಭಾಷಾ ಸೂತ್ರದ ಬದಲಿಗೆ ದ್ವಿಭಾಷಾ ನೀತಿ ಜಾರಿಗೆ ಪೂರಕವಾಗಿ 10ನೇ ತರಗತಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಅಂಕಗಳ ಬದಲಿಗೆ ಕೇವಲ ಗ್ರೇಡಿಂಗ್ಗೆ ಪರಿಗಣಿಸುವ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು 2026ರ ಮಾ.29ರಂದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟ ಮತ್ತು ಪ್ರಸಾರವಾಗಿದೆ.
ಸಚಿವರ ಈ ಹೇಳಿಕೆ ಏಕಪಕ್ಷೀಯ ಮತ್ತು ಆತುರದ ಕ್ರಮವಾಗಿದೆ. ಸಾರ್ವಜನಿಕರು ಮತ್ತು ಶಿಕ್ಷಣ ಹಾಗೂ ಭಾಷಾ ಪರಿಣಿತರೊಂದಿಗೆ ಸಮಾಲೋಚನೆ ನಡೆಸದೆ ಮತ್ತು ಸಚಿವ ಸಂಪುಟದಲ್ಲಿ ಚರ್ಚಿಸದೆ ಏಕಪಕ್ಷೀಯವಾಗಿ ಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ. ನೀತಿ ನಿರ್ಣಯ ವಿಚಾರಗಳನ್ನು ಅಧಿಕೃತ ಆದೇಶ ಅಥವಾ ಅಧಿಸೂಚನೆ ಇಲ್ಲದೆ ಕೇವಲ ಹೇಳಿಕೆ ಮೂಲಕ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಸಚಿವ ಈ ಹೇಳಿಕೆ ವಿದ್ಯಾರ್ಥಿಗಳು ಮತ್ತು ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಿದೆ. ಆದ್ದರಿಂದ ಸಚಿವರ ಹೇಳಿಕೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.