ಅಧಿಕಾರ ಕೊಟ್ಟರೆ ರಾಜ್ಯದ ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಬಿಡಿಸುವೆ: ಎಚ್ಡಿಕೆ
ಬೆಂಗಳೂರು: ‘ಸ್ವತಂತ್ರ ಸರ್ಕಾರ ರಚಿಸಲು ಜೆಡಿಎಸ್ಗೆ ಅವಕಾಶ ನೀಡಿ. ಬೆಂಗಳೂರು ಮತ್ತು ರಾಜ್ಯದಲ್ಲಿ ಅಭಿವೃದ್ಧಿಗೆ ಬಡಿದಿರುವ ಗ್ರಹಣವನ್ನು ಬಿಡಿಸುತ್ತೇನೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಕ್ಷದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ‘ಜೆಡಿಎಸ್ ಗ್ರೇಟರ್ ಬೆಂಗಳೂರು ಸಮಾವೇಶ’ವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೆ. ನಂತರ ಬಂದ ಸರ್ಕಾರಗಳು ಆ ಕಾರ್ಯಕ್ರಮಗಳನ್ನು ಕಡೆಗಣಿಸಿದವು’ ಎಂದರು.
‘ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ವೃತ್ತದವರೆಗೆ ನಾಲ್ಕು ಪಥಗಳ ಸುರಂಗ ರಸ್ತೆ ನಿರ್ಮಿಸಲು ಟೆಂಡರ್ ಕರೆದಿದ್ದೆವು.
ನಮ್ಮ ಸರ್ಕಾರ ಹೋದ ಮೇಲೆ ಆ ಯೋಜನೆಯೂ ಹೋಯಿತು. ಈಗಿನ ಸರ್ಕಾರ ಅಂಥದ್ದೇ ಯೋಜನೆ ಜಾರಿಗೆ ಮುಂದಾಗಿದೆ. ನಾನು ₹3,000 ಕೋಟಿ ವೆಚ್ಚದ ಯೋಜನೆ ರೂಪಿಸಿದ್ದರೆ, ಇವರು ₹28,000 ಕೋಟಿ ವೆಚ್ಚ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ನಗರದಲ್ಲಿ ಯಾವೊಂದು ರಸ್ತೆಗಳೂ ಗುಂಡಿಗಳಿಂದ ಮುಕ್ತವಾಗಿಲ್ಲ. ಕಸದ ರಾಶಿ ಎಲ್ಲೆಡೆ ಬಿದ್ದಿದೆ. ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಇವುಗಳಿಂದ ನಗರ ಮುಕ್ತವಾಗಬೇಕು ಅಂದರೆ ನಮ್ಮ ಸರ್ಕಾರ ಬರಬೇಕು. ಆಗ ಯಾರ ಎದುರೂ ಕೈಜೋಡಿಸುವ ಸ್ಥಿತಿ ಬರುವುದಿಲ್ಲ. ಅಭಿವೃದ್ಧಿ ಕಾರ್ಯ ನಡೆಸಬಹುದು. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ಚುನಾವಣೆಗಳಿಂದಲೇ ಆಗಬೇಕು. ಟಿಕೆಟ್ ಆಕಾಂಕ್ಷಿಗಳು, ಪಕ್ಷದ ನಾಯಕರು ಪ್ರತಿ ವಾರ್ಡ್ನಲ್ಲಿ ದಿನ ಒಂದು ಗಂಟೆ ಸಮಯ ವಿನಿಯೋಗಿಸಿದರೂ ನಾವು ಗೆಲ್ಲಬಹುದು’ ಎಂದರು.