VIDEO| ವಿಜಯ್ಗೆ ಹೂಚೆಂಡು ಎಸೆದ ಅಭಿಮಾನಿ; ‘ಅಯ್ಯೊ ಬಾಂಬ್’ ಎಂದು ಭಯಬಿದ್ದ ದಳಪತಿ
ಚೆನ್ನೈ: ತಮಿಳುನಾಡಿನ ಚುನಾವಣಾ ಕಣ ರಂಗೇರುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಕೂಡ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಚುನಾವಣಾ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ವಿಜಯ್, ಕನ್ಯಾಕುಮಾರಿ ಹೆದ್ದಾರಿಯೊಂದರಲ್ಲಿ ಸೈಕಲ್ ರ್ಯಾಲಿ ಕೈಗೊಂಡಿದ್ದರು.
ಭಾರಿ ಪ್ರಮಾಣದ ಜನ ಸೇರಿದ್ದ ಈ ರ್ಯಾಲಿಯಲ್ಲಿ ವಿಜಯ್, ಏಕಾಂಗಿಯಾಗಿ ಸೈಕಲ್ ಸವಾರಿ ಮಾಡುತ್ತಿರುವ ವೇಳೆ, ಅವರ ಅಭಿಮಾನಿಯೊಬ್ಬ ಅವರ ಮೇಲೆ ಹೂಗಳನ್ನು ಎಸೆದಿದ್ದಾನೆ. ತಕ್ಷಣವೇ ಅದನ್ನು ‘ಫ್ಲವರ್ ಬಾಂಬ್’ ಎಂದು ಭಾವಿಸಿ, ವಿಜಯ್ ಅವರು ಸೈಕಲ್ ಬಿಟ್ಟು ಓಡಿಹೋಗಿದ್ದಾರೆ.
ಘಟನೆಯ ವಿಡಿಯೊ ಸೆರೆಯಾಗಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಕೆಲವರು, ವಿಜಯ್ ಅವರ ಸ್ಟಂಟ್ ಏನಿದ್ದರೂ ಸಿನಿಮಾಗಳಲ್ಲಿ ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವರು, ಭದ್ರತಾ ಲೋಪವಾಗುವಂತಹ ಈ ರೀತಿಯ ತೋರಿಕೆಯ ಪ್ರಚಾರ ಬೇಕೇ ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನವು ಏ.23ರಂದು ನಡೆಯಲಿದೆ. ಈ ಬಾರಿ ಟಿವಿಕೆ ಪಕ್ಷವು ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ ಎಂದು ಕೆಲವು ಚುನಾವಣಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ.