ತಿರುಪತಿ ತಿಮ್ಮಪ್ಪನಿಗೆ ಹೈದರಾಬಾದ್ ಭಕ್ತನಿಂದ ಪ್ರಾಣದಾನ ಟ್ರಸ್ಟ್ಗೆ 1ಕೋ.ರೂ.ದೇಣಿಗೆ
ತಿರುಪತಿ: ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ ಎಂಬ ಖ್ಯಾತಿಯ ತಿರುಮಲ ತಿರುಪತಿ ದೇವಸ್ಥಾನದ (TTD) 'ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್'ಗೆ ಹೈದರಾಬಾದ್ ಮೂಲದ ಭಕ್ತರೊಬ್ಬರು ಸೋಮವಾರ 1 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.
ಹೈದರಾಬಾದ್ ಮೂಲದ ಉಕ್ಕು ತಯಾರಿಕಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಅಲ್ಲೂರಿ ವರ್ಮಾ ಅವರು ಈ ಬೃಹತ್ ಮೊತ್ತವನ್ನು ದಾನ ಮಾಡಿದ ಭಕ್ತರಾಗಿದ್ದಾರೆ. ತಿರುಮಲ ಶ್ರೀವಾರಿ ದೇವಾಲಯದ ರಂಗನಾಯಕುಲ ಮಂಟಪದಲ್ಲಿ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ. ವೆಂಕಯ್ಯ ಚೌಧರಿ ಅವರಿಗೆ ದೇಣಿಗೆಯ ಡಿಮ್ಯಾಂಡ್ ಡ್ರಾಫ್ಟ್ (DD) ಅನ್ನು ಹಸ್ತಾಂತರಿಸಿದರು.
ಏನಿದು ಪ್ರಾಣದಾನ ಟ್ರಸ್ಟ್?
ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ 2001ರ ನವೆಂಬರ್ನಲ್ಲಿ ಟಿಟಿಡಿ ಈ ಟ್ರಸ್ಟ್ ಅನ್ನು ಸ್ಥಾಪಿಸಿತ್ತು.ಹೃದಯ, ಮೂತ್ರಪಿಂಡ, ಮೆದುಳು ಹಾಗೂ ಕ್ಯಾನ್ಸರ್ನಂತಹ ಜೀವಹಾನಿಕಾರಕ ಕಾಯಿಲೆಗಳಿಂದ ಬಳಲುತ್ತಿರುವ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದು ಈ ಟ್ರಸ್ಟ್ನ ಮುಖ್ಯ ಗುರಿಯಾಗಿದೆ.
ತಿರುಪತಿಯಲ್ಲಿರುವ ಟಿಟಿಡಿ ಅಧೀನದ ಆಸ್ಪತ್ರೆಗಳಲ್ಲಿ ಈ ನಿಧಿಯ ಮೂಲಕ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಶ್ರೀನಿವಾಸನ ಮೇಲಿರುವ ಭಕ್ತಿ ಮತ್ತು ಸಾಮಾಜಿಕ ಕಳಕಳಿಯಿಂದ ನೀಡಿರುವ ಈ ದೇಣಿಗೆಯು ಅನೇಕ ಬಡ ರೋಗಿಗಳ ಜೀವ ಉಳಿಸಲು ನೆರವಾಗಲಿದೆ ಎಂದು ದೇವಸ್ಥಾನದ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.