Select Location
All Locations
State
Region
City / District
‘ಮಹಿ ಭಾಯ್ ಅದೊಂದು ದಾಖಲೆ ಮುರಿದಾಗ ಸಂತೋಷವಾಗುತ್ತದೆ’ ಎಂದ ಕೆ.ಎಲ್.ರಾಹುಲ್

‘ಮಹಿ ಭಾಯ್ ಅದೊಂದು ದಾಖಲೆ ಮುರಿದಾಗ ಸಂತೋಷವಾಗುತ್ತದೆ’ ಎಂದ ಕೆ.ಎಲ್.ರಾಹುಲ್

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ ಅಂದರೆ ಅದು ಕನ್ನಡಿಗ ಕೆ.ಎಲ್. ರಾಹುಲ್. ಸದ್ಯ ನಡೆಯುತ್ತಿರುವ ಐಪಿಎಲ್‌ನ ಆರೆಂಜ್ ಕ್ಯಾಪ್ ಓಟದಲ್ಲಿಯೂ ಅವರು ಅಗ್ರಸ್ಥಾನದಲ್ಲಿದ್ದಾರೆ. ಈ ನಡುವೆ ಅವರು ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ದಾಖಲೆ ಒಂದನ್ನು ಮುರಿದಾಗ ನನಗೆ ಸಂತೋಷವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಧೋನಿ ಅವರ ಐಪಿಎಲ್‌ನ ಗರಿಷ್ಠ ರನ್‌ಗಳ ದಾಖಲೆ ಮುರಿದಿರುವುದರ ಕುರಿತು ಮಾತನಾಡಿದ ಕೆ.ಎಲ್. ರಾಹುಲ್, ‘ನಾನು ಮಹಿ ಭಾಯ್ ಅವರ ದಾಖಲೆಯನ್ನು ದಾಟಿ ಹೋಗಿದ್ದೇನೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಸರಿಯಾಗಿ ಆಡುತ್ತಿದ್ದೇನೆ ಎಂಬ ಭರವಸೆ ನೀಡಲು, ವೈಯಕ್ತಿಕ ಮೈಲಿಗಲ್ಲುಗಳು ಸಹಕಾರಿಯಾಗುತ್ತವೆ. ಆದರೆ ನನಗೆ ನಿಜವಾಗಿಯೂ ಸಂತೋಷ ಉಂಟು ಮಾಡುವುದು ಧೋನಿ ಗೆದ್ದಷ್ಟು ಟ್ರೋಫಿಗಳನ್ನು ಗೆದ್ದಾಗ’ ಎಂದಿದ್ದಾರೆ. ‘ಕ್ರಿಕೆಟ್ ಒಂದು ಗುಂಪಿನ ಕ್ರೀಡೆ. ಇಲ್ಲಿ ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಟ್ರೋಫಿ ಗೆಲ್ಲುವುದು ನಮ್ಮ ಗುರಿಯಾಗಿರಬೇಕು. 

ಯಶಸ್ವಿ ತಂಡದ ಭಾಗವಾಗುವುದು ಎಲ್ಲಕ್ಕಿಂತಲೂ ಸಂತೋಷ ನೀಡುತ್ತದೆ. ಹಾಗಾಗಿ ಧೋನಿ ಗೆದ್ದಷ್ಟು ಟ್ರೋಫಿಗಳನ್ನು ಗೆದ್ದರೆ ನನಗೆ ಸಂತೋಷವಾಗುತ್ತದೆ’ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘ಚಿನ್ನಸ್ವಾಮಿ ಕ್ರೀಡಾಂಗಣ ನನಗೆ ತುಂಬಾ ವಿಶೇಷ. ನಾನು ಅಲ್ಲಿಯೇ ಆಡಿ ಬೆಳೆದಿದ್ದೇನೆ. ಹಾಗಾಗಿ, ಅಲ್ಲಿಗೆ ಹೋದಾಗ ನನ್ನೊಳಗೆ ಮಾನಸಿಕ ಬದಲಾವಣೆ ಸಂಭವಿಸುತ್ತದೆ. ಆ ಮೈದಾನದಲ್ಲಿ ನಾನು ಉತ್ತಮವಾಗಿ ಆಡುತ್ತೇನೆ. ಅದು ಕೇವಲ ಆರ್‌ಸಿಬಿ ವಿರುದ್ಧ ಮಾತ್ರವಲ್ಲ, ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಉತ್ತಮವಾಗಿ ಆಡಿದ್ದೇನೆ’ ಎಂದಿದ್ದಾರೆ.

ಇತ್ತೀಚೆಗೆ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ 152 ರನ್ ಗಳಿಸುವ ಮೂಲಕ ಐಪಿಎಲ್‌ನ ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಮಾಡಿದ್ದಾರೆ.


Prajavani 1 day ago
Home Flash News