Transport Employees Protest: ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್, ಪ್ರತಿಭಟನೆ ನಡೆಸದಂತೆ ಆದೇಶ
ಬೆಂಗಳೂರು (ಮೇ.19): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರ ಸಂಘಟನೆಗಳು (Transport Workers Organization) ಕರೆ ಕೊಟ್ಟಿದ್ದ ಮುಷ್ಕರಕ್ಕೆ ಹೈಕೋರ್ಟ್ (High Court) ಬ್ರೇಕ್ ಹಾಕಿದೆ. ನ್ಯಾ.ಸೂರಜ್ ಗೋವಿಂದರಾಜ್ ಮತ್ತು ನ್ಯಾ.ಕೆ.ಮನ್ಮಥರಾವ್ ಅವರಿದ್ದ ಪೀಠ ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿದೆ. ಸರ್ಕಾರ ಜೊತೆ ಸಾರಿಗೆ ಸಂಘಟನೆಗ ಮಾತುಕತೆ ನಡೆಸಲಿ, ಮುಷ್ಕರ ಬೇಡ ಎಂದು ಕೋರ್ಟ್ ಹೇಳಿದೆ.
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು, ಪ್ರತಿಭಟನೆಗೆ ಬ್ರೇಕ್ ಹಾಕಿದೆ. ಸದ್ಯಕ್ಕೆ ಯಾವುದೇ ಪ್ರತಿಭಟನೆ ನಡೆಸದಂತೆ ಆದೇಶ ನೀಡಿದೆ. ಸಾರ್ವಜನಿಕರ ಹಿತಾದೃಷ್ಠಿಯಿಂದ ಈ ನಿರ್ಧಾರ ಎಂದು ಕೋರ್ಟ್ ತಿಳಿಸಿದ್ದು, ಮುಷ್ಕರಕ್ಕೆ ಮಧ್ಯಂತರ ತಡೆ ನೀಡಿದೆ. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ಗೆ ಕೆಲಸದ ಮಹಿಳೆ ಮತ್ತು ಕಟ್ಟಡ ಕಾರ್ಮಿಕ ಪಿಐಎಲ್ ಸಲ್ಲಿಸಿದ್ದರು. ಇವರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ವಾದಿಸುತ್ತಿದ್ದಾರೆ.
ಪಿಐಎಲ್ ಅರ್ಜಿದಾರರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್, ಮುಷ್ಕರ ಬೇಡ. ಈಗಾಗಲೇ ನಿಮಗೆ ಶೇ.12.5 ನೀಡಲಾಗಿದೆ. ಯಾವಾಗ ಸಭೆ ನಡೆಸುತ್ತೀರಿ? ಎಂದು ಪ್ರಶ್ನೆ ಮಾಡಿತು. ನಮ್ಮ ಬೇಡಿಕೆಗಳನ್ನು ಸರಿಯಾಗಿ ಪರಿಗಣಿಸುತ್ತಿಲ್ಲ ಅಂತ ಸಾರಿಗೆ ನೌಕರರ ಪರ ಕ್ಲಿಫ್ಟನ್ ರೋಜಾರಿಯೋ ಹೇಳಿದ್ರು. ಮುಷ್ಕರ ಮಾಡದಂತೆ ಇಂದು ತಡೆಹಿಡಿಯುತ್ತೇವೆ. ಸರ್ಕಾರದ ಜೊತೆ ಮಾತುಕತೆ ನಡೆಸಿ, ಗುರುವಾರ ವಿಚಾರಣೆ ನಡೆಸೋಣ ಎಂದು ಪೀಠ ತಿಳಿಸಿದೆ.
ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ನಿರ್ಬಂಧ ಹೇರಿದ್ದು, ಸರ್ಕಾರ ಹಾಗೂ ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು, ಸಾರಿಗೆ ಸಚಿವರೊಂದಿಗೆ ಸಭೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ. ಮುಷ್ಕಕರ ನಡೆಸಲು ಉದ್ದೇಶಿಸಿರುವ ಜಂಟಿ ಕ್ರಿಯಾ ಸಮಿತಿ ಜೊತೆಗೆ ಸಾರಿಗೆ ಸಚಿವರು ಮತ್ತು ಸಂಬಂಧಿತ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಲು ಆದೇಶಿಸಿದ ನ್ಯಾಯಾಲಯ, ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.