'ಕನ್ನಡ ರಾಮಯ್ಯ' ಎ೦ಬ ಮಾರ್ದನಿಯಲ್ಲಿ ಸಿದ್ದರಾಮಯ್ಯ ಮುಂದಾಳತ್ವ: ಸಂತೋಷ್ ಲಾಡ್
ಬೆಂಗಳೂರು: 'ಸಿದ್ದರಾಮಯ್ಯ ಅವರ ಗರಡಿಯಲ್ಲಿ ಪಳಗಿದವ ನಾನು, ಅವರ ಆಡಳಿತದಲ್ಲಿ ಶಾಸಕ, ಸಚಿವನಾಗಿದ್ದವ ನಾನು, ಅವರೊಟ್ಟಿಗೆ, ಅವರ ಅಣತಿಯಂತೆ ಕರ್ತವ್ಯ ನಿರ್ವಹಿಸಿದವ ನಾನು ಎಂಬುದೇ ನನ್ನ ಪಾಲಿನ ಶಾಶ್ವತ ಸಾರ್ಥಕತೆಗಳಲ್ಲೊಂದು' ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಲಾಡ್, 'ನನಗೆ ರಾಜಕಾರಣದ ವ್ಯಾಕರಣ ಹೇಳಿಕೊಟ್ಟು, ಕೈ ಹಿಡಿದು ನಡೆಸಿಕೊ೦ಡು ಬ೦ದವರು ಸಿದ್ದರಾಮಯ್ಯನವರು. ರಾಜಕೀಯದ ಪ್ರತಿ ಹೆಜ್ಜೆಯಲ್ಲೂ ನಾನು ಅವರಿ೦ದ ಕಲಿತ ವಿಷಯಗಳು ಸಾಕಷ್ಟಿವೆ. ಸರ್ಕಾರದ ಪ್ರತಿ ಯೋಜನೆಗಳು ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲೇಬೇಕು ಎಂಬ ವಿಷಯದಲ್ಲಿ ಅವರಿಗಿರುವ ಬದ್ಧತೆಗೆ ಅವರೊಬ್ಬರೇ ಸಾಟಿ' ಎಂದು ಹೇಳಿದ್ದಾರೆ. 'ನಾಡಿನ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ, ಎಲ್ಲ ಸಮುದಾಯಗಳ ಅಭ್ಯುದಯಕ್ಕೆ ಹಾಗೂ ವಿಶೇಷವಾಗಿ ಕನ್ನಡ ಭಾಷೆಯ ಅಸ್ಮಿತೆಗಾಗಿ ಸಿದ್ದರಾಮಯ್ಯ ಅವರು ಇಟ್ಟ ಹೆಜ್ಜೆ, ತೋರಿಸಿದ ಧೈರ್ಯ ಎಲ್ಲರಿಗೂ ಸದಾ ಸ್ಫೂರ್ತಿ' ಎಂದು ಮೆಲುಕು ಹಾಕಿದ್ದಾರೆ. 'ಇವತ್ತು ಅವರು ಅಧಿಕಾರದಿ೦ದ ನಿರ್ಗಮಿಸಿರಬಹುದು. ಆದರೆ ಪ್ರತಿಯೊಬ್ಬ ಕನ್ನಡಿಗರ ಎದೆಯಲ್ಲಿ, ಕನ್ನಡ ರಾಮಯ್ಯ ಎ೦ಬ ಮಾರ್ದನಿಯಲ್ಲಿ ಅವರ ಮು೦ದಾಳತ್ವ ಯಾವತ್ತಿಗೂ ಇರಲಿದೆ. ನಮ್ಮ ನಾಡಿಗೆ, ಸರ್ಕಾರಕ್ಕೆ ಹಾಗೂ ಕಾ೦ಗ್ರೆಸ್ ಪಕ್ಷಕ್ಕೆ ಅವರ ಮಾರ್ಗದರ್ಶನ ಶ್ರೀರಕ್ಷೆಯಾಗಿರಲಿದೆ' ಎಂದಿದ್ದಾರೆ.