ನನ್ನನ್ನು ಕೊಲ್ಲಲಿ ಅಥವಾ ಬಂಧಿಸಲಿ: ನನ್ನ ಹೆತ್ತವರ ರಕ್ತ ಚೆಲ್ಲಿದ ಸ್ವಂತ ಮಣ್ಣಿನಲ್ಲೇ ಸಾವು ಬರಲಿ; ಬಾಂಗ್ಲಾಕ್ಕೆ ಮರಳಲು ಹಸೀನಾ ನಿರ್ಧಾರ
ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆದ ಭಾರಿ ದಂಗೆಯ ನಂತರ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ಮೇಲೆ ತಾಯ್ನಾಡಿನಲ್ಲಿ ಮರಣದಂಡನೆ ಶಿಕ್ಷೆ ಘೋಷಣೆಯಾಗಿದ್ದರೂ ಸಹ, ತಾವು ಡಿಸೆಂಬರ್ ವೇಳೆಗೆ ಬಾಂಗ್ಲಾದೇಶಕ್ಕೆ ಮರಳಿ ನ್ಯಾಯಾಲಯಕ್ಕೆ ಶರಣಾಗುವುದಾಗಿ ಅವರು ತಿಳಿಸಿದ್ದಾರೆ. 2024ರಲ್ಲಿ ನಡೆದ ವಿದ್ಯಾರ್ಥಿ ದಂಗೆಯ ಬಳಿಕ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು. ಈ ದಂಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವಿಶೇಷ ನ್ಯಾಯಾಲಯವು ಅವರ ಗೈರುಹಾಜರಿಯಲ್ಲಿಯೇ ಮರಣದಂಡನೆ ವಿಧಿಸಿದೆ. ಅಲ್ಲದೆ, ಅವರ ನೇತೃತ್ವದ 'ಅವಾಮಿ ಲೀಗ್' ಪಕ್ಷವನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಸ್ವದೇಶಕ್ಕೆ ಮರಳಿದಾಗ ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು. ಆದರೂ ನಾನು ದೇಶಕ್ಕೆ ಮರಳಲಿದ್ದೇನೆ. ಸಾವು ಬರುವುದಾದರೆ ನನ್ನ ಹೆತ್ತವರ ರಕ್ತ ಚೆಲ್ಲಿದ ಸ್ವಂತ ಮಣ್ಣಿನಲ್ಲೇ ಬರಲಿ ಎಂದು ಹಸೀನಾ ಭಾವುಕರಾಗಿ ನುಡಿದಿದ್ದಾರೆ. ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಹಸೀನಾ, ಇವೆಲ್ಲವೂ ರಾಜಕೀಯ ಪ್ರೇರಿತ ಸುಳ್ಳು ಪ್ರಕರಣಗಳು ಎಂದು ಕಿಡಿಕಾರಿದ್ದಾರೆ. "ನ್ಯಾಯಾಲಯದ ವಿಚಾರಣೆ ಆರಂಭವಾದರೆ ಸಾಕು, ಈ ಪ್ರಕರಣಗಳು ಎಷ್ಟು ಹಾಸ್ಯಾಸ್ಪದ ಎಂಬುದು ಜನರಿಗೆ ತಿಳಿಯಲಿದೆ. ಅದನ್ನು ಸಾಬೀತುಪಡಿಸುವುದಕ್ಕಾಗಿಯೇ ನಾನು ಮರಳುತ್ತಿದ್ದೇನೆ," ಎಂದಿದ್ದಾರೆ.