ಮಂಗಳೂರು: ಲೈಸನ್ಸ್ ಇಲ್ಲದೆ ಬಸ್ಸು ಚಲಾಯಿಸಿ ಅಪಘಾತ: ಬಸ್ಸಿನ ಚಾಲಕ, ಮಾಲಕರಿಗೆ ಜೈಲು ಶಿಕ್ಷೆ
ಮಂಗಳೂರು: ಲೈಸನ್ಸ್ ಇಲ್ಲದೆ ಬಸ್ಸು ಚಲಾಯಿಸಿ ಅಪಘಾತ ಸಂಭವಿಸಿದ ಪ್ರಕರಣದಲ್ಲಿ ಮಂಗಳೂರಿನ ನ್ಯಾಯಾಲಯವು ಚಾಲಕ ಮತ್ತು ಮಾಲಕ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚಾಲಕ ನಿಶಿತ್ ಶೆಟ್ಟಿ ಮತ್ತು ಬಸ್ ಮಾಲಕ ಪ್ರೀತಂ ದೇವೇಂದ್ರ ಕುಲಾಲ್ ಶಿಕ್ಷೆಗೆ ಒಳಗಾದವರು. ಪ್ರಕರಣದ ವಿವರ ಬೆಂದೂರ್ವೆಲ್ ಜಂಕ್ಷನ್ನಲ್ಲಿ 2024ರ ಜು.10ರಂದು ಸುಂದರಿ (66) ಅವರು ಶಕ್ತಿನಗರಕ್ಕೆ ಹೋಗುವ ಬಸ್ಸನ್ನು ಹತ್ತಲು ರಸ್ತೆ ದಾಟುತ್ತಿದ್ದಾಗ ಕರಾವಳಿ ವೃತ್ತದ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ನಿಶಿತ್ ಶೆಟ್ಟಿ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಬಸ್ ಢಿಕ್ಕಿ ಹೊಡೆದಿತ್ತು. ಸುಂದರಿ ಅವರು ರಸ್ತೆಯ ಮೇಲೆ ಬಿದ್ದು ಬಸ್ನ ಎದುರಿನ ಚಕ್ರವು ಅವರ ಬಲಕಾಲಿನ ಮೇಲೆ ಹರಿದು ತೀವ್ರ ಸ್ವರೂಪದ ಗಾಯವಾಗಿತ್ತು.
ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರಿನ ಜೆ.ಎಂ.ಎಫ್.ಸಿ 8ನೇ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷ ಆರ್. ಅವರು ಆ.25ರಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಬಸ್ ಚಾಲಕ ನಿಶಿತ್ ಶೆಟ್ಟಿಗೆ ಲೈಸೆನ್ಸ್ ಇಲ್ಲದೆ ಬಸ್ಸು ಚಲಾಯಿಸಿದ್ದಕ್ಕೆ ಒಂದು ತಿಂಗಳ ಸಾದಾ ಜೈಲು ವಾಸ ಹಾಗೂ 5,000 ರೂ. ದಂಡ ಹಾಗೂ ಬಸ್ನ ಮಾಲಕ ಪ್ರೀತಮ್ ದೇವೇಂದ್ರ ಕುಲಾಲ್ ಬಸ್ ಅನ್ನು ಚಲಾಯಿಸಲು ನೀಡಿದ್ದಕ್ಕೆ ಒಂದು ತಿಂಗಳ ಸಾದಾ ಜೈಲು ವಾಸ ಹಾಗೂ 5,000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಆರೋನ್ ಡಿ’ಸೋಜಾ ವಿಟ್ಲ ಅವರು ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.